ನಟ ಯಶ್ ತಾಯಿ ಪುಷ್ಪಾ ಕೊತ್ತಲವಾಡಿ ಸಿನಿಮಾದ ಮೂಲಕ ನಿರ್ಮಾಪಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ಕೊತ್ತಲವಾಡಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲುವಲ್ಲಿ ಸಕ್ಸಸ್ ಆಗಿಲ್ಲ. ಒಳ್ಳೆ ಸಿನಿಮಾಗಳನ್ನು ಕೆಲವರು ಸೋಲಿಸುವ ಪ್ರಯತ್ನ ಮಾಡುತ್ತಾರೆ ಎಂದು ಪುಷ್ಪಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿನಿಮಾಗಳಿಗೆ ಕೆಲವರು ಸುಳ್ಳು ರಿವ್ಯೂ ಹಾಕ್ತಾರೋ, ಸಿನಿಮಾಗಳನ್ನು ಕೊಲ್ಲುವ ಕೆಲಸ ಮಾಡುತ್ತಾರೆ ಎಂದು ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಮ್ಮ ಮಕ್ಕಳ ಬಗ್ಗೆ ರಮ್ಯಾ ಮಾತನಾಡಿದ್ದರ ಬಗ್ಗೆಯೂ ಪುಷ್ಪಾ ಅರುಣ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ್ದಕ್ಕೆ ರಮ್ಯಾ ಅವರನ್ನು ಟ್ರೋಲ್ ಮಾಡಿ ಅಶ್ಲೀಲವಾಗಿ ಮೆಸೇಜ್ ಮಾಡಲಾಗಿತ್ತು. ಈ ಬಗ್ಗೆ ನಟಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು ದೂರಿನ ಅನ್ವಯ ಹಲವರನ್ನು ಬಂಧಿಸಲಾಗಿತ್ತು. ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ನಟಿ ರಮ್ಯಾ, ಎರಡು ವರ್ಷಗಳ ಹಿಂದೆ ನಾನು ಪೋಸ್ಟ್ ಮಾಡಿದ್ದೆ. ಯಶ್, ಸುದೀಪ್ ಫ್ಯಾನ್ಸ್ ವಾರ್ ವೇಳೆ ಅವರ ಹೆಂಡ್ತಿ ಮಕ್ಕಳ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ರು. ನನಗೆ ಆಗ ಬೇಸರವಾಗಿತ್ತು ಎಂದು ನಟಿ ರಮ್ಯಾ ಬೇಸರ ವ್ಯಕ್ತಪಸಿದ್ದರು. ಇದೀಗ ಈ ಬಗ್ಗೆಯೂ ಪುಷ್ಪಾ ಮಾತನಾಡಿದ್ದಾರೆ.
ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಯಶ್ ತಾಯಿ ಪುಷ್ಪಾ ಅವರು ಮಾತನಾಡಿ, ಒಬ್ಬ ಲೇಡಿಯಾಗಿ ರಮ್ಯಾ ಎದುರು ನಿಂತಿದ್ದಾರೆ. ಬೇರೆ ಯಾರೂ ಮಾತನಾಡಿಲ್ಲ. ಯಾಕ್ರಪ್ಪಾ ಹೀಗೆಲ್ಲಾ ಮಾಡ್ತೀರಾ? ಎಲ್ಲರೂ ಕೆಟ್ಟದಾಗಿ ಕಾಮೆಂಟ್ ಮಾಡಲ್ಲ, ಕೆಲವ್ರು ಮಾತ್ರ ಮಾಡ್ತೀರಾ? ಯಾಕೆ ಬೇಕು. ವಿದ್ಯಾವಂತರಾಗಿದ್ದೀರಾ, ಇದೆಲ್ಲ ತಪ್ಪಲ್ಲವೇ? ಯಾಕೆ ಕರ್ನಾಟಕದ ಹೆಸರು ಹಾಳು ಮಾಡ್ತೀರಾ? ಎಂದು ಪ್ರಶ್ನಿಸಿದ್ದಾರೆ.
ರಮ್ಯಾ ಬಂದು ಇಷ್ಟೆಲ್ಲಾ ಮಾತನಾಡ್ಬೇಕಾ? ನಮ್ ಯಶ್ ಮಕ್ಕಳ ಬಗ್ಗೆ ಮಾತನಾಡಿದ್ದಾರೆ? ಯಶ್ ಏನು ಆಗಬೇಕಿಲ್ಲ, ಅವರ ಮನೆಯವ್ರು ಏನು ಆಗಬೇಕಿಲ್ಲ, ಆದರೂ ಒಬ್ಬ ಲೇಡಿಯಾಗಿ ಯಶ್ ಮನೆ ಬಗ್ಗೆ ಮಾತನಾಡಿದ್ರು. ನನಗೆ ಅಲ್ಲಿಯವರೆಗೂ ಗೊತ್ತಿರಲಿಲ್ಲ. ಗೊತ್ತಾಗಿದ್ರೆ, ಅವತ್ತೇ ಟಿವಿಯಲ್ಲಿ ಕೂತು ಮಾತಾಡ್ತಿದ್ದೆ. ನನ್ನ ಮೊಮ್ಮಕ್ಕಳ ಬಗ್ಗೆ ಮಾತಾಡಿದ್ರೆ ಮಕ್ಕುಗಿತ್ತೀನಿ. ನಾನು ಬದುಕಿರುವವರೆಗೂ ನಮ್ಮ ಮೊಮ್ಮಕ್ಕಳ ಬಗ್ಗೆ ಯಾರು ಮಾತನಾಡಲು ಬಿಡಲ್ಲ, ಅಂತ ಕೆಲ್ಸ ಅವರಪ್ಪನೇ ಮಾಡೋಕೆ ಬಿಡಲ್ಲ. ರಮ್ಯಾ ಬಂದು ನಮ್ ಮನೆ ವಿಷ್ಯಾ ಮಾತಾಡ್ಬೇಕಾ? ನಾನು ರಮ್ಯಾ ವಿಷ್ಯಾ ಮಾತಾಡ್ಬೇಕಾ? ಯಾಕ್ರಪ್ಪ ಹೀಗೆಲ್ಲಾ ಮಾಡ್ತೀರಾ? ಇದರಿಂದ ಎಲ್ಲರಿಗೂ ಸಮಸ್ಯೆ. ಒಂದು ವೇಳೆ ತಪ್ಪಾಗಿದ್ದರೆ ಕ್ಷಮೆ ಕೇಳಿ ಎಲ್ಲ ಬಿಟ್ಟುಬಿಡಿ ಎಂದು ಪುಷ್ಪಾ ಹೇಳಿದರು.