ಅನೂಪ್ ಭಂಡಾರಿ ನಟನೆಯ ‘ರಂಗಿತರಂಗ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಮೂಲಕ ಅನೂಪ್ ಭಂಡಾರಿ ನಿರ್ದೇಶಕನಾಗಿ ಬಡ್ತಿ ಪಡೆದಿದ್ದು ಸ್ಟಾರ್ ನಿರ್ದೇಶಕ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾಗೆ ಸ್ಪರ್ಧೆ ನೀಡಿತ್ತು. ಇದೀಗ ಈ ಸಿನಿಮಾಗೆ ದರ್ಶಕದ ಸಂಭ್ರಮವಾಗಿದ್ದು ಇದೇ ವೇಳೆ ಸಿನಿಮಾವನ್ನು ರೀರಿಲೀಸ್ ಮಾಡಲು ನಿರ್ದೇಶಕರು ನಿರ್ಧರಿಸಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೋಂಡಿರುವ ನಿರ್ದೇಶಕ ಅನೂಪ್ ಭಂಡಾರಿ, ‘10 ವರ್ಷ ತುಂಬಿದ ಖುಷಿಯಲ್ಲಿ ರಂಗಿತರಂಗ ಸಿನಿಮಾ ಜುಲೈ 10ರಂದು ಮತ್ತೆ ರಿಲೀಸ್ ಆಗುತ್ತಿದೆ. ಯಾರು ಈ ಚಿತ್ರವನ್ನು ಇನ್ನೂ ವೀಕ್ಷಿಸಿಲ್ಲವೋ ಅಥವಾ ಮತ್ತೊಮ್ಮೆ ಈ ಚಿತ್ರವನ್ನು ನೋಡಬೇಕು ಎಂದು ಯಾರು ಬಯಸಿದ್ದೀರೋ ಅವರು ವೀಕ್ಷಿಸಬಹುದು. ನಮ್ಮ ಚಿತ್ರಕ್ಕೆ ಐತಿಹಾಸಿಕ ಗೆಲುವನ್ನು ತಂದುಕೊಟ್ಟ ಪ್ರತಿಯೊಬ್ಬರಿಗೂ ಮತ್ತೊಮ್ಮೆ ಧನ್ಯವಾದಗಳು. ಥಿಯೇಟರ್ನಲ್ಲಿ ಸಿಗೋಣ’ ಎಂದು ಅನೂಪ್ ಭಂಡಾರಿ ಬರೆದುಕೊಂಡಿದ್ದಾರೆ.
ಗಟ್ಟಿ ನಿರ್ಧಾರ ಮಾಡಿ ಅಂದುಕೊಂಡ ದಿನದಂದ ರಂಗಿತರಂಗ ಸಿನಿಮಾ ರಿಲೀಸ್ ಮಾಡಿತ್ತು ಚಿತ್ರತಂಡ. ಅದೇ ಸಮಯಕ್ಕೆ ಸರಿಯಾಗಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಬಾಹುಬಲಿ ಸಿನಿಮಾ ಕೂಡ ಬಿಡಗುಡೆ ಆಗಿತ್ತು. ಈ ವೇಳೆ ಸಾಕಷ್ಟು ಜನ ರಂಗಿತರಂಗ ತಂಡವನ್ನು ಆಡಿಕೊಂಡಿದ್ದರು. ಈ ವೇಳೆ ಅನೂಪ್ ಭಂಡಾರಿ, ನಿರೂಪ್ ಭಂಡಾರಿ, ರಾಧಿಕಾ ನಾರಾಯಣ್, ಆವಂತಿಕಾ ಶೆಟ್ಟಿ ಹೀಗೆ ಎಲ್ಲ ಹೊಸ ಹೆಸರುಗಳೆ. ಹೆಸರೇ ಇಲ್ಲದ ಹುಡುಗರ ಟೀಮ್ ವೊಂದು ಹುಚ್ಚಾಟ ಮಾಡುತ್ತಿದೆ ಎಂದು ಹೇಳಿದ್ದರು. ಬಾಹುಬಲಿ ಅಬ್ಬರಕ್ಕೆ ಸಿನಿಮಾ ಬಲಿಯೇ ಆಗಲಿದೆ ಎಂದು ಆಡಿಕೊಂಡವರ ಬಾಯಿಗೆ ಬೀಗ ಹಾಕಿತ್ತು ರಂಗಿತರಂಗ. ಬಾಹುಬಲಿಯ ಯಶಸ್ಸಿನ ನಡುವೆಯೂ ಬರೋಬ್ಬರಿ ಒಂದು ವರ್ಷಗಳ ಕಾಲ ರಂಗಿತರಂಗ ಪ್ರದರ್ಶನ ಕಂಡು ಸೂಪರ್ ಹಿಟ್ ಆಗಿತ್ತು. ಇದೀಗ ಚಿತ್ರವನ್ನು ಮತ್ತೆ ಪ್ರೇಕ್ಷಕರ ಮುಂದಿಡಲು ಚಿತ್ರತಂಡ ಮುಂದಾಗಿದೆ.