ಕನ್ನಡ ಭಾಷೆಯ ಬಗ್ಗೆ ಮಾತನಾಡಿದ ನಟ ಕಮಲ್ ಹಾಸನ್ ವಿವಾದಕ್ಕೆ ಕಾರಣವಾಗಿದೆ. ಕಮಲ್ ನೀಡಿರುವ ಹೇಳಿಕೆಯಿಂದ ಕನ್ನಡಿಗರಿಗೆ ತೀವ್ರ ಅಸಮಾಧಾನವಾಗಿದ್ದು ಯಾವುದೇ ಕಾರಣಕ್ಕೂ ಕಮಲ್ ಹಾಸನ್ ನಟನೆಯ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಹಲವು ಸಂಘಟನೆಗಳು ಆಕ್ರೋಶ ಹೊರ ಹಾಕಿವೆ. ಕಮಲ್ ನಡೆಯನ್ನು ಹಲವು ನಟಿ, ನಟಿಯರು ವಿರೋಧಿಸಿದ್ದಾರೆ. ಈ ಮಧ್ಯೆ ನಟಿ, ನಿರ್ದೇಶಕಿ ಹಾಗೂ ಬರಹಗಾರ್ತಿ ರಂಜನಿ ರಾಘವನ್ ಅವರು ಕಮಲ್ ಹಾಸನ್ ಅವರಿಗೆ ತಾವು ಬರೆದ ಕನ್ನಡದ ಪುಸ್ತಕ ನೀಡಿದ್ದಾರೆ.
ಕಮಲ್ ಹಾಸನ್ ಅವರಿಗೆ ರಂಜನಿ ತಾವು ಬರೆದ ‘ಕಥೆ ಡಬ್ಬಿ’ ಹಾಗೂ ‘ಸ್ವೈಪ್ ರೈಟ್’ ಪುಸ್ತಕಗಳನ್ನು ನೀಡಿದ್ದರು. ಇದರ ಫೋಟೋಗಳನ್ನು ನಟಿ ಸೋಷಿಯಲ್ ಮೀಡಯಾದಲ್ಲಿ ಶೇರ್ ಮಾಡಿದ್ದಾರೆ. ಇದು ಯಾವ ಸಂದರ್ಭದಲ್ಲಿ ನೀಡಿದ ಪುಸ್ತಕ ಎಂಬುದನ್ನು ರಂಜನಿ ಉಲ್ಲೇಖಿಸಿಲ್ಲ. ಆದರೆ, ‘ಕಮಲ್ ಸರ್ಗೆ ಕನ್ನಡ ಪುಸ್ತಕ’ ಎಂದು ಕ್ಯಾಪ್ಶನ್ ನೀಡಿದ್ದು, ಹಳದಿ ಹಾಗೂ ಕೆಂಪು ಬಣ್ಣದ ಎಮೋಜಿ ಹಾಕಿದ್ದಾರೆ. ಈ ಫೋಟೋಗಳು ಸದ್ಯ ವೈರಲ್ ಆಗಿದೆ.
ಕರ್ನಾಟಕದಲ್ಲಿ ತಮ್ಮ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಯಾವುದೇ ಕಾರಣಕ್ಕೂ ಸಿನಿಮಾ ರಿಲೀಸ್ ಆಗಲು ಬಿಡುವುದಿಲ್ಲ, ಸಿನಿಮಾ ರಿಲೀಸ್ ಮಾಡಿದರೆ ಥಿಯೇಟರ್ ಗೆ ಬೆಂಕಿ ಹಚ್ಚುವುದಾಗಿ ಹಲವು ಸಂಘಟನೆಗಳು ಬೆದರಿಕೆ ಹಾಕಿವೆ. ಆದ್ರೆ ಕಮಲ್ ಚಿತ್ರ ಪ್ರದರ್ಶನವನ್ನು ತಡೆಯದಂತೆ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೂಚಿಸಬೇಕು. ಸಿನಿಮಾ ಪ್ರದರ್ಶನಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ರಾಜ್ಯ ಪೊಲೀಸ್ ಮಹಾನಿರ್ದೇಶಕರು, ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಬೇಕೆಂದು ನಟ ಕಮಲ್ ಹಾಸನ್ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.