ಗದಗ:- ಕೋಲ್ಕತ್ತಾದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣವನ್ನು ಖಂಡಿಸಿ ಗದಗನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ನೂರಾರು ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಳೆದ ಭಾನುವಾರ ಕೋಲ್ಕತ್ತಾದ ಆರ್ ಜೆಕರ್ ಮೆಡಿಕಲ್ ಹಾಸ್ಪಿಟಲ್ ನಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಡಾ: ಮೌಮಿತಾ ಎನ್ನುವ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿ ಕೀಚಕರು ಕೊಲೆಗೈದಿದ್ದರು.
ಹೀಗಾಗಿ ಈ ಘೋರ ಘಟನೆ ಖಂಡಿಸಿ ಐಎಮ್ ಎ ಗದಗ, ಜಿಮ್ಸ್ ವತಿಯಿಂದ ಕಪ್ಪು ಬಟ್ಟೆ ಧರಿಸಿ, ಕ್ಯಾಂಡಲ್ ಹಚ್ಚಿ ಪ್ರತಿಭಟನೆ ನಡೆಸಲಾಯಿತು. ಐಎಮ್ ಎ ಕಚೇರಿಯಿಂದ ಗಾಂಧಿ ಸರ್ಕಲ್ ವರೆಗೆ ಮೆರವಣಿಗೆ ನಡೆಸಿದರು.
ವೈದ್ಯರಿಗೆ ಸುರಕ್ಷತೆ ನೀಡುವ ಕ್ರಮವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕು. ಘಟನೆಯಿಂದ ಸಮಾಜ ಎಚ್ಚೆತ್ತುಕೊಳ್ಳಬೇಕು. ಕೊಲ್ಕತ್ತದಲ್ಲಿ ಆದ ಘಟನೆ ಎಲ್ಲಿಯೂ ಆಗಬಹುದು. ಹಿಂದೆಯೂ ಈ ರೀತಿಯ ಹೀನ ಕೃತ್ಯಗಳು ನಡೆದಿವೆ. ಮುಂದೆ ಆಗಬಾರದು. ಈಗ ಶಾಂತಿಯುತವಾಗಿ ಪ್ರತಿಭಟಿಸಿದ್ದೇವೆ. ಕ್ರಮ ಕೈಗೊಳ್ಳದಿದ್ರೇ, ಕಠಿಣ ಹೋರಾಟ ಮಾಡಬೇಕಾಗುತ್ತೆ ಎಂದು ಐಎಮ್ ಎ ಅಧ್ಯಕ್ಷ ಡಾ ಪಲ್ಲೇದ್ ಎಚ್ಚರಿಕೆ ನೀಡಿದ್ದಾರೆ.