ವಿಜಯಸಾಕ್ಷಿ ಸುದ್ದಿ, ಗದಗ: ಸಾಮಾನ್ಯವಾಗಿ ನಿವೃತ್ತಿ ಕಾರ್ಯಕ್ರಮಗಳು ಕುಟುಂಬ ವರ್ಗಕ್ಕೆ, ಆಪ್ತರಿಗೆ ಮಾತ್ರ ಸೀಮಿತವಾಗಿರುತ್ತವೆ. ಆದರೆ ರವಿ ಗುಂಜೀಕರ ಅವರ ಅಭಿಮಾನಿ ಬಳಗ ಅವರ ನಿವೃತ್ತಿಯ ನಿಮಿತ್ತ ಹಮ್ಮಿಕೊಂಡ ಜನೋಪಯೋಗಿ ಕಾರ್ಯಕ್ರಮಗಳನ್ನು ನೋಡಿದರೆ ಇದು ನಿಜವಾಗಿಯೂ ಸಾರ್ಥಕ ಹಾಗೂ ಮಾದರಿ ನಿವೃತ್ತಿ ಸಮಾರಂಭವಾಗಿದೆ ಎಂದು ಮಣಕವಾಡದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ನುಡಿದರು.
ಅವರು ಬುಧವಾರ ನಗರದ ಡಿ. ದೇವರಾಜ ಅರಸು ಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ರವಿ ಎಲ್. ಗುಂಜೀಕರ ಅವರ ನಿವೃತ್ತಿ ನಿಮಿತ್ತ ಅವರ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮ ಹಾಗೂ ಬಸವಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸರ್ಕಾರಿ ಸೇವೆಯನ್ನು ಜನಸೇವೆ ಎಂದು ಭಾವಿಸಿ ಅನೇಕ ಹಿಂದುಳಿದ ಜನರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ನೆರವಾದ ರವಿ ಗುಂಜೀಕರ ತಾವು ಸಮಾಜದ ಋಣ ಇಟ್ಟುಕೊಳ್ಳದೇ ಸಮಾಜದ ಮೇಲೆ ಋಣ ಹೊರಿಸಿರುವ ಅಪರೂಪದ ವ್ಯಕ್ತಿ. ಬಸವ ಜಯಂತಿ ಹಾಗೂ ಅಕ್ಷಯ ತೃತೀಯದ ಈ ಶುಭದಿನದಂದು 60 ಸಸಿಗಳನ್ನು ನೆಟ್ಟಿರುವುದು ಶ್ಲಾಘನೀಯ ಎಂದರು.
ಇAದಿನ ದಿನಗಳಲ್ಲಿ ಗಿಡ-ಮರ ಉಳಿಸಿ ಬೆಳಸುವ ಅನಿವಾರ್ಯತೆ ಹೆಚ್ಚಿದೆ. ಆರು ದಿನಗಳ ಕಾಲ ಹಮ್ಮಿಕೊಂಡಿರುವ ರಕ್ತದಾನ, ಪೌರಕಾರ್ಮಿಕರಿಗೆ ಸನ್ಮಾನ, ಮಹಿಳಾ ದಿನಾಚರಣೆ, ಶಾಲೆ ದತ್ತು ಸ್ವೀಕಾರ ಕಾರ್ಯಕ್ರಮಗಳು ವೈಶಿಷ್ಠ್ಯಪೂರ್ಣವಾಗಿದ್ದು, ಸಂಪೂರ್ಣ ಯಶಸ್ಸು ಕಾಣಲಿ ಎಂದು ಹಾರೈಸಿದ ಅವರು ನಿವೃತ್ತಿ ನಂತರ ಗುಂಜೀಕರ ಅವರು ಇನ್ನೂ ಹೆಚ್ಚು ಸಮಾಜಮುಖಿಯಾಗಲಿ ಆಶಿಸಿದರು.
ಅರಣ್ಯ ಇಲಾಖೆ ಅಧಿಕಾರಿ ಜಯರಾಮ ಮಾತನಾಡಿ, ರವಿ ಗುಂಜೀಕರ ಅವರ ನಿವೃತ್ತಿ ಅಂಗವಾಗಿ 60 ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂತಸ ತಂದಿದ್ದು, ಈ ಭಾಗದಲ್ಲಿ ಜನ್ಮದಿನದಂತಹ ವಿಶೇಷ ಕಾರ್ಯಕ್ರಮಗಳಲ್ಲಿ ಸಸಿ ನೆಡುವ ನಿರ್ಣಯ ಕೈಗೊಂಡರೆ ಅದಕ್ಕೆ ಅರಣ್ಯ ಇಲಾಖೆ ಸಹಾಯ-ಸಹಕಾರ ನೀಡುತ್ತದೆ. ಕೇವಲ ಸಸಿಗಳನ್ನು ಹಚ್ಚುವುದಷ್ಟೇ ಮುಖ್ಯವಲ್ಲ, ಅವುಗಳನ್ನು ಪೋಷಿಸುವುದು ಅವಶ್ಯವಾಗಿದೆ ಎಂದರು.
ಶಿವಯೋಗಿ ಬಂಡಿ ಹಾಗೂ ಹಿರೇಮಠ ರವಿ ಗುಂಜೀಕರ ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ಕೆ.ಎಫ್. ಹಳ್ಯಾಳ, ಎಂ.ಎಂ. ಹಣಶಿ, ಎಚ್.ವೈ. ಸಂದಕದ, ಬಸವರಾಜ ಗದಗಿನ, ಆರ್.ಎಂ. ಲಿಂಬನಾಯಕ, ಎಸ್.ಎಸ್. ಪಾಟೀಲ, ಜಿ.ಎನ್. ಮಲ್ಲೂರ, ಬಸವರಾಜ ದೇಸಾಯಿ, ಅರುಣಕುಮಾರ ಚವ್ಹಾಣ, ಎಂ.ಎಂ. ನಿಟ್ಟಳ್ಳಿ, ಲಕ್ಷö್ಮಣರೆಡ್ಡಿ ಮುಧೋಳ, ತಿಪ್ಪಣ್ಣವರ ಸೇರಿದಂತೆ ರವಿ ಗುಂಜೀಕರ ಅಭಿಮಾನಿ ಬಳಗದ ಸದಸ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ ನಿರೂಪಿಸಿದರು.
“ನೌಕರರು ನಿವೃತ್ತಿಯಾಗುವುದು ಸಹಜ. ಆದರೆ ನಿವೃತ್ತಿ ಕಾರ್ಯಕ್ರಮಗಳು ಸಮಾಜಮುಖಿ ನೆಲೆಗಟ್ಟಿನಲ್ಲಿ ವಿಧಾಯಕವಾಗಿ ನಡೆಯಬೇಕು ಎನ್ನುವ ಚಿಂತನೆಯಿಂದ ನನ್ನ ಅಭಿಮಾನಿ ಬಳಗದವರು ಆರು ದಿನಗಳ ಕಾಲ ದಿನವೂ ಒಂದು ಉತ್ಕೃಷ್ಟ-ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮೊದಲ ದಿನದಂದು ಅಭಿನವ ಮೃತ್ಯುಂಜಯ ಶ್ರೀಗಳಿಂದ ಸಸಿ ನೆಡುವ ಕಾರ್ಯಕ್ರಮದ ಮೂಲಕ ಚಾಲನೆ ಸಿಕ್ಕಿರುವುದು ಸಂತಸ ತಂದಿದೆ”
– ರವಿ ಎಲ್.ಗುಂಜೀಕರ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾಜಿ ಜಿಲ್ಲಾಧಿಕಾರಿ.