ಬೆಂಗಳೂರು:- ಐಪಿಎಲ್ 2025ರ ಋತುವಿನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಆರ್ಸಿಬಿ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಿದ ವಿಜಯೋತ್ಸವದ ಸಂಭ್ರಮಾಚರಣೆಯಿಂದ ಭಾರೀ ಸಂಕಷ್ಟಕ್ಕೆ ಸಿಲುಕಿದೆ. ಗೆಲುವಿನ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಯಲ್ಲಿ 11 ಜನರು ಸಾವನ್ನಪ್ಪಿದ್ದು ಈ ಸಂಬಂಧ ಆರ್ಸಿಬಿ, ಕೆಎಸ್ಸಿಎ ಮತ್ತು ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಡಿಎನ್ಎ ಎಂಟರ್ಟೈನ್ಮೆಂಟ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಹೊತ್ತಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಫ್ರಾಂಚೈಸಿಯನ್ನು ಮಾರಲಾಗುತ್ತಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಸುದ್ದಿ ಮಾಡಿದೆ. ಆದರೆ ಈ ವದಂತಿಯನ್ನು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪನಿ ತಳ್ಳಿಹಾಕಿದೆ. ಆರ್ಸಿಬಿ ತಂಡವನ್ನು ಮಾರಾಟ ಮಾಡಲಾಗುತ್ತದೆ ಎನ್ನುವ ಸುದ್ದಿ ಶುದ್ಧ ಸುಳ್ಳು, ಊಹಾಪೋಹ ಅಷ್ಟೇ. ತಂಡವನ್ನು ಮಾರಾಟ ಮಾಡುತ್ತಿಲ್ಲ ಎಂದು ಆರ್ಸಿಬಿಯ ಮಾಲಕಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ. ಆರ್ಸಿಬಿ ತಂಡವನ್ನು ಪೂರ್ಣವಾಗಿಯಾಗಲೀ, ಭಾಗಶಃ ಆಗಿಯಾಗಲೀ ಮಾರಾಟ ಮಾಡುತ್ತಿಲ್ಲ ಎಂದು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪನಿ ಹೇಳಿಕೆ ನೀಡಿದೆ.