ವಿಜಯಸಾಕ್ಷಿ ಸುದ್ದಿ, ಗದಗ : ಅಧಿಕಾರಕ್ಕೆ ಬಂದು ಕೇವಲ ೯ ತಿಂಗಳಲ್ಲಿ ಸುಮಾರು ೧,೯೩,೨೪೬ ಕೋಟಿ ರೂ ಸಾಲ ಮಾಡಿ ಪ್ರತಿಯೊಬ್ಬ ಕನ್ನಡಿಗನ ಮೇಲೆ ೨೮ ಸಾವಿರ ರೂ ಸಾಲ ಹೊರಿಸಿ, ಹಿಂದು ಸಮುದಾಯದ ತುಷ್ಟೀಕರಣಕ್ಕಾಗಿ, ಕೆಲವು ಸಮುದಾಯಗಳ ಓಲೈಕೆಗಾಗಿ ಲಕ್ಷಾಂತರ ಕೋಟಿ ಸಾಲ ಮಾಡಿ ರಾಜ್ಯದ ಜನರನ್ನು ಸಂಪೂರ್ಣವಾಗಿ ಸಾಲದ ಸುಳಿಗೆ ಸಿಲುಕಿಸಿದ್ದಾರೆ ಎಂದು ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಬಹುಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿಕೊಂಡು ಕೆವಲ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಗಳ ಒಲೈಕೆ ಮಾಡುವ ಬಜೆಟ್ ಇದಾಗಿದೆ. ವಾಣಿಜ್ಯ ತೆರಿಗೆ ೫೮%, ಅಬಕಾರಿ ಸುಂಕ ೨೦%, ನೊಂದಣಿ ಮುದ್ರಾಂಕ ೧೪%, ಮೊಟರ್ ವಾಹನ ತೆರಿಗೆ ೭%, ಇತರೆ ೧% ಹೆಚ್ಚಳ ಮಾಡುವುದರ ಮೂಲಕ ರಾಜ್ಯದ ಜನತೆಗೆ ಅನ್ಯಾಯವನ್ನು ಎಸಗಿದ್ದಾರೆ. ಇದು ಬಜೆಟ್ ಆಗಿರದೆ, ರಾಜ್ಯದ ಜನತೆ ಕಿವಿಯ ಮೇಲೆ ಹೂವಿನ ತೋಟ ಇಟ್ಟಂತಾಗಿದೆ ಎಂದಿದ್ದಾರೆ.



