ಕನ್ನಡ ಮಾಧ್ಯಮ ಕೃಪಾಂಕ ಕುರಿತು ಚರ್ಚೆಗೆ ಸಿದ್ಧ: ಸಚಿವ ಎಚ್.ಕೆ. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಕನ್ನಡಿಗರಿಗೆ ಉದ್ಯೋಗದಲ್ಲಿ ಗ್ರಾಮೀಣ ಕೃಪಾಂಕದಂತೆ, ಕನ್ನಡ ಮಾಧ್ಯಮ ಕೃಪಾಂಕ ನೀಡುವ ಕುರಿತು ಸಮ್ಮೇಳನದಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕೋರಿದಲ್ಲಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಚರ್ಚಿಸಲು ಸಿದ್ಧ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

Advertisement

ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಸೋಮವಾರ ಜರುಗಿದ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಆಂಗ್ಲ ಭಾಷೆಯ ಹೆಚ್ಚಿನ ಪ್ರಭಾವದಲ್ಲಿ ಕನ್ನಡ ಭಾಷೆ ಸಮಸ್ಯೆ ಎದುರಿಸುತ್ತಿದೆ. ಇಂತಹ ಸವಾಲುಗಳ ನಡುವೆ ಕನ್ನಡ ಭಾಷೆ ಅಭಿವೃದ್ಧಿಗೆ, ಪರಿಹಾರ ಕಂಡುಕೊಳ್ಳುವ ಅಗತ್ಯತೆ ಇದೆ. ಕನ್ನಡ ಭಾಷಾ ಅಭಿವೃದ್ಧಿ, ಪ್ರಾಚ್ಯಾವಶೇಷ ಸಂಶೋಧನೆ, ಜಿಲ್ಲೆಯ ಸಾಹಿತ್ಯ, ಪ್ರಾಚ್ಯವಸ್ತು, ಶಾಸನ, ಜಿಲ್ಲೆಯ ಸಮಗ್ರ ಮಾಹಿತಿಗಳನ್ನು ಒಳಗೊಂಡ ಜಿಲ್ಲೆಯ ಅಂತರ್ಜಾಲ ಸೃಷ್ಟಿಸಲು ಜಿಲ್ಲಾ ಮಟ್ಟದ ಸಮಿತಿ ರಚನೆ ಮಾಡಲು ಈಗಾಗಲೇ ನಿರ್ಣಯಿಸಲಾಗಿದೆ. ಜಿಲ್ಲೆಯು ರಾಜ್ಯದ ಸಾಂಸ್ಕೃತಿಕ ರಾಜಧಾನಿ ಆಗಲು ಇದೊಂದು ಮಹತ್ವದ ಬೆಳವಣಿಗೆ ಆಗಲಿದೆ ಎಂದರು.

ಸ್ವಾತಂತ್ರ‍್ಯ ಹೋರಾಟ, ಗೋವಾ ವಿಮೋಚನಾ ಚಳುವಳಿ, ಕರ್ನಾಟಕ ಏಕೀಕರಣ, ನೀರಾವರಿ ಹೋರಾಟದಲ್ಲಿ ಗದಗ ಜಿಲ್ಲೆಯು ಪ್ರಮುಖ ಪಾತ್ರ ವಹಿಸಿದೆ. ಜಿಲ್ಲೆಯು ಹಲವು ವೈಶಿಷ್ಟ್ಯತೆಗಳಿಂದ ದೇಶದಲ್ಲಿ ಗುರುತಿಸಿಕೊಂಡಿದೆ. ಜಿಲ್ಲೆಯಲ್ಲಿ ಶಿಲಾಯುಗದ 20ಕ್ಕೂ ಹೆಚ್ಚು ಸ್ಥಳಗಳು ಸಂಶೋಧನೆಗಳಿಂದ ಬೆಳಕಿಗೆ ಬಂದಿದ್ದು, ಜಿಲ್ಲೆಯ ಇತಿಹಾಸವನ್ನು ಲಕ್ಷಕ್ಕೂ ಅಧಿಕ ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗುತ್ತದೆ. 1961ರಲ್ಲಿ ಗದಗ ಜಿಲ್ಲೆಯಲ್ಲಿ ನಡೆದ ರಾಜ್ಯ ಸಾಹಿತ್ಯ ಸಮ್ಮೇಳನದಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡು ಮೊದಲ ಬಾರಿ ಹಕ್ಕೊತ್ತಾಯ ಮಾಡಲಾಯಿತು ಎಂದರು.

ಸಮ್ಮೇಳನದ ವೇದಿಕೆಯಲ್ಲಿ ‘ಅಂತರಗAಗೆ’ ಸ್ಮರಣ ಸಂಚಿಕೆಯನ್ನು ಶಾಸಕ ಜಿ.ಎಸ್. ಪಾಟೀಲ ಬಿಡುಗಡೆಗೊಳಿಸಿದರು. ಸಮ್ಮೇಳನದ ಸರ್ವಾಧ್ಯಕ್ಷರನ್ನು, ಸಾಧಕರನ್ನು ಸನ್ಮಾನಿಸಲಾಯಿತು. ಗದಗ ತೋಂಟದಾರ್ಯ ಮಠದ ಸಿದ್ಧರಾಮ ಶ್ರೀಗಳು, ಮೈಸೂರುಮಠದ ವಿಜಯಮಾಂತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ಚಂದ್ರಶೇಖರ ವಸ್ತ್ರದ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಮಿಥುನ್ ಪಾಟೀಲ, ಟಿ. ಈಶ್ವರ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಸಿಇಓ ಭರತ್ ಎಸ್, ಸಾಹಿತಿ ರವೀಂದ್ರನಾಥ ದೊಡ್ಡಮೇಟಿ, ವೀರಣ್ಣ ಶೆಟ್ಟರ, ಪರಶುರಾಮ ಅಳಗವಾಡಿ, ವಿ.ಆರ್. ಗುಡಿಸಾಗರ, ಮುತ್ತಣ್ಣ ಕಡಗದ, ಪ್ರಶಾಂತ ರಾಠೋಡ, ಅಪ್ಪು ಮತ್ತಿಕಟ್ಟಿ, ಮುಕ್ತುಂಸಾಬ್ ಮುದೊಳ, ರಫೀಕ್ ತೋರಗಲ್, ಅಶೋಕ ಬಾಗಮಾರ, ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಇತರರು ಹಾಜರಿದ್ದರು.

ಸಾಹಿತ್ಯ ಸಮ್ಮೇಳನದ ಹಿಂದಿನ ಇತಿಹಾಸವನ್ನು ಪದೇ ಪದೇ ನವ ಪೀಳಿಗೆಗಳಿಗೆ ಹೇಳುತ್ತಿರಬೇಕು. ಕನ್ನಡತನವು ಸಾಹಿತ್ಯ, ಸಂಗೀತ, ಕ್ರೀಡಾ, ಸಾಂಸ್ಕೃತಿಕವಾಗಿ ಶ್ರೀಮಂತವಾಗಲು ಗದಗ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಗದಗ ಜಿಲ್ಲೆಯ ರೋಣ ಹಾಗೂ ಗಜೇಂದ್ರಗಡ ಪಟ್ಟಣಗಳು ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸಿವೆ. ಕುಮಾರವ್ಯಾಸ, ನಯಸೇನ, ದುರ್ಗಸಿಂದ, ಭೀಮಸೇನ ಜೋಶಿ ಸೇರಿದಂತೆ ಅನೇಕ ಮಹನೀಯರಿಂದ ಈ ನಾಡು ಮತ್ತಷ್ಟು ಗರಿಮೆ ಹೊಂದುವಂತೆ ಮಾಡಿದೆ ಡಾ. ಎಚ್.ಕೆ. ಪಾಟೀಲ ತಿಳಿಸಿದರು.

ರೋಣ ಮತ್ತು ಗಜೇಂದ್ರಗಡ ತಾಲೂಕುಗಳಿಗೆ ಮಲಪ್ರಭಾ ನದಿ ನೀರು ಸಂಪರ್ಕಿಸಬಹುದು. ಈ ನಿರ್ಣಯಕ್ಕೆ ನಾನು ಕಟಿಬದ್ಧನಾಗಿದ್ದೇನೆ. ಗದಗ- ವಾಡಿ ರೈಲು ಮಾರ್ಗ ಕಾರಣಾಂತರಗಳಿಂದ ಬದಲಾಗಿದೆ. ಮೂಲ ಯೋಜನೆ ಬಗ್ಗೆ ಸಮ್ಮೇಳನದಲ್ಲಿ ನಿರ್ಣಯ ಕೈಗೊಂಡು ಸಚಿವರಿಗೆ, ಸರ್ಕಾರಕ್ಕೆ ಸಲ್ಲಿಸುವ ಅಗತ್ಯವಿದೆ. ರೋಣ, ಗಜೇಂದ್ರಗಡ ಪಟ್ಟಣದಲ್ಲಿ ವಾಸ್ತುಶಿಲ್ಪಗಳ ಕುರುಹುಗಳಿವೆ. ವಾಸ್ತುಶಿಲ್ಪಗಳನ್ನು ಗುರುತಿಸುವ ಕೆಲಸ ಮಾಡಲಾಗಿದೆ. ಅವುಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ ಮುನ್ನುಡಿ ಬರೆಯಲಾಗಿದೆ.

– ಜಿ.ಎಸ್. ಪಾಟೀಲ.

ಖನಿಜ ನಿಗಮದ ಅಧ್ಯಕ್ಷರು, ರೋಣ ಶಾಸಕರು.


Spread the love

LEAVE A REPLY

Please enter your comment!
Please enter your name here