ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಾವು ಈಗಾಗಲೇ ಸೈನ್ಯದಿಂದ ನಿವೃತ್ತರಾಗಿ ಬಂದಿದ್ದೇವೆ. ಈಗ ನಡೆದಿರುವ ಯುದ್ಧದಲ್ಲಿ ನಮ್ಮ ಸಹೋದರ, ಸಹೋದರಿಯರು ಕೆಚ್ಚೆದೆಯಿಂದ ಹೋರಾಡಿ ಭಾರತಕ್ಕೆ ಜಯ ತಂದಿದ್ದಾರೆ. ಒಂದು ವೇಳೆ ಇನ್ನೂ ಯುದ್ಧ ಮುಂದುವರೆದು, ಅಲ್ಲಿ ನಮ್ಮ ಅವಶ್ಯಕತೆಯೇನಾದರೂ ಇದ್ದರೆ ನಾವು ಸಂತೋಷದಿಂದ ಯುದ್ಧಕ್ಕೆ ತೆರಳಲು ಸಿದ್ಧ ಎಂದು ನರೇಗಲ್ಲದ ನಿವೃತ್ತ ಸೈನಿಕರೆಲ್ಲರೂ ಒಕ್ಕೊರಲಿನಿಂದ ಶಪಥಗೈದರು.
ಪಟ್ಟಣ ಪಂಚಾಯಿತಿ ಬಳಿಯಿರುವ ನಿವೃತ್ತ ಯೋಧರ ಕಚೇರಿಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಪರಸ್ಪರ ಸಿಹಿ ಹಂಚಿ ಸಂತೋಷ ವ್ಯಕ್ತಪಡಿಸಿದ ಯೋಧರು, ತಮ್ಮಲ್ಲಿ ಇನ್ನೂ ಯುದ್ಧದ ಕೆಚ್ಚು ಇದೆ ಎಂಬುದನ್ನು ಸಾಬೀತುಪಡಿಸಿದರು.
ಸಂಘದ ಅಧ್ಯಕ್ಷ ಶಿವಪುತ್ರಪ್ಪ ಸಂಗನಾಳ ಮಾತನಾಡಿ, ನಾವು ಎಂದಿಗೂ ಯೋಧರೇ. ನಮ್ಮ ಸೇವೆ ಎಂದಿಗೂ ಭಾರತಾಂಬೆಗೆ ಮೀಸಲು. ಸರಕಾರ ಮತ್ತೆ ನಮ್ಮ ಸೇವೆಯನ್ನು ಪಡೆದುಕೊಳ್ಳಲು ಬಯಸಿದರೆ ನಾವು ಎಂದಿಗೂ ಸಿದ್ಧ ಎಂದರು.
ಪಾಕಿಸ್ತಾನದ ಮಾತು ಎಂದಿಗೂ ನಂಬಿಕೆಗೆ ಅರ್ಹವಲ್ಲ. ಈಗಲೂ ಸಹ ಪಾಕಿಸ್ತಾನ ಅದೇ ಬುದ್ಧಿಯನ್ನು ತೋರಿಸಿದರೆ ಸರಕಾರ ಹಿಂದೇಟು ಹಾಕದೆ ಪಾಕಿಸ್ತಾನದ ಮೇಲೆ ನಿರ್ಣಾಯಕ ಯುದ್ಧವನ್ನೇ ಮಾಡಬೇಕೆಂದು ಅನೇಕ ನಿವೃತ್ತ ಸೈನಿಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈವೇಳೆ ಪ್ರಭುದೇವ ಮುಕ್ಕನಗೌಡರ, ಉಮೇಶ ಕರಮುಡಿ, ಗುರುಶಾಂತಗೌಡ ಮಲ್ಲನಗೌಡರ, ಮಂದಾಲಪ್ಪ ಸಂಗನಾಳ, ಶಿವಪ್ಪ ಶಿವಾಪುರ, ಬಸವರಾಜ ಕಡೆತೋಟದ, ಜಿ.ಎಸ್. ಮಲ್ಲನಗೌಡರ, ರೇವಣಸಿದ್ದಪ್ಪ ನರಗುಂದ, ಈರಪ್ಪ ದೊಡ್ಡಣ್ಣವರ, ಶಿವಾನಂದ, ಎಂ.ಬಿ. ಕಡೆತೋಟದ, ಬಸವೇಶ್ವರ ಚಿಕ್ಕೊಪ್ಪದ ಇನ್ನಿತರರಿದ್ದರು.