ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಮಹಾ ಶಿವರಾತ್ರಿಯ ಅಂಗವಾಗಿ ಇಲ್ಲಿಯ ವಿವಿಧ ಶಿವ ದೇವಾಲಯಗಳಲ್ಲಿ ಶೃದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು.
ಐತಿಹಾಸಿಕ ಮಾಣಿಕೇಶ್ವರ, ಕೋಟೆ ವೀರಭದ್ರೇಶ್ವರ, ಕಾಶಿ ವಿಶ್ವನಾಥ, ವಿರೂಪಾಕ್ಷೇಶ್ವರ, ಹಾಲಗೊಂಡ ಬಸವೇಶ್ವರ, ಮಲ್ಲಿಕಾರ್ಜುನ ದೇವಸ್ಥಾನದಲ್ಲಿರುವ ಶಿವಲಿಂಗಕ್ಕೆ ಹೂವು, ಬಿಲ್ವ ಪತ್ರಿಗಳಿಂದ ಸಿಂಗರಿಸಿ ರುದ್ರಾಭಿಷೇಕ ನೆರವೇರಿಸಲಾಯಿತು. ಬೆಳಿಗ್ಗೆಯಿಂದಲೇ ಉಪವಾಸ ವೃತವನ್ನು ಆಚರಿಸಿದ ಭಕ್ತರು ಸಂಜೆ ಹೂವು, ಹಣ್ಣು, ನೈವೇದ್ಯದೊಂದಿಗೆ ಸಂಕಲ್ಪವನ್ನು ಅರ್ಪಿಸಿದರು.
ಇಲ್ಲಿಯ ಪ್ರಜಾಪಿತ ಬ್ರಹ್ಮುಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶಿವ ಧ್ವಜಾರೋಹಣವನ್ನು ನೆರವೆರಿಸಲಾಯಿತು. ನಂತರ ಬಿ.ಕೆ. ಸರೋಜಕ್ಕ ಅವರ ನೇತೃತ್ವದಲ್ಲಿ ಗ್ರಾಮದ ಪ್ರಮುಖ ಬೀದಿಯಲ್ಲಿ ಶಿವಲಿಂಗ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಸಮೀಪದ ಹರ್ಲಾಪೂರ, ಅಡವಿಸೋಮಾಪೂರ, ಸಂಭಾಪೂರ, ಪಾಪನಾಶಿ, ಕದಾಂಪೂರ ಗ್ರಾಮಗಳಲ್ಲಿ ಶಿವನ ಕುರಿತು ಜಾಗೃತಿಯ ಭಿತ್ತಿ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಕೆ ಸರೋಜಕ್ಕನವರು, ನಮ್ಮ ದೇಶದಲ್ಲಿ ಹಬ್ಬಗಳು, ದಿನಾಚರಣೆಗಳು, ಉತ್ಸವಗಳನ್ನು ಮಾಡುತ್ತಾ ಬಂದಿದ್ದು, ಇವುಗಳಲ್ಲಿ ಪ್ರಮುಖವಾಗಿದ್ದು ಶಿವರಾತ್ರಿಯಾಗಿದೆ. ಮನುಷ್ಯನಲ್ಲಿ ತುಂಬಿರುವ ಅಜ್ಞಾನವೆಂಬ ರಾತ್ರಿಯನ್ನು ದೂರ ಮಾಡಿ ಜ್ಞಾನದ ಪ್ರಭೆಯನ್ನು ಹರಿಸಲು ಜ್ಯೋತಿ ಸ್ವರೂಪ ಶಿವ ಪರಮಾತ್ಮನು ಈ ಧರೆಗೆ ಬಂದಿರುವ ದಿನವೇ ಮಹಾಶಿವರಾತ್ರಿಯಾಗಿದೆ. ಶಿವನನ್ನು ಅರಿತು ನಿರಂತರ ಧ್ಯಾನಿಸುವುದೇ ಸತ್ಯ ಉಪವಾಸವಾಗಿದೆ. ದುಷ್ಟ ಸಂಗ, ದುಶ್ಚಟ, ದುರ್ಗಣ, ದುರಾಭ್ಯಾಸದಿಂದ ನಮ್ಮನ್ನು ರಕ್ಷಿಸುವಂತೆ ಸದಾ ಎಚ್ಚರಿಕೆಯಲ್ಲಿರುವುದೇ ನಿಜವಾದ ಜಾಗರಣೆಯಾಗಿದೆ ಎಂದು ತಿಳಿಸಿದರು.