`ವಿಶ್ವ ಪಾರ್ಶ್ವವಾಯು ದಿನ’ ಕಾರ್ಯಕ್ರಮದಲ್ಲಿ ಡಾ. ರಾಜೇಂದ್ರ ಸಿ. ಬಸರಿಗಿಡದ
ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚಿನ ದಿನಗಳಲ್ಲಿ ಪಾರ್ಶ್ವವಾಯು ಸಮಸ್ಯೆ ಸಮಾಜದಲ್ಲಿ ಹೆಚ್ಚಾಗುತ್ತಿದ್ದು, ಪಾರ್ಶ್ವವಾಯುವಿನಿಂದ ಕುಟುಂಬ/ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದೆ ಉಳಿಯುತ್ತಿದೆ. ಪಾರ್ಶ್ವವಾಯುವಿನ ಲಕ್ಷಣಗಳನ್ನು ಬೇಗನೆ ಗುರುತಿಸಿ ಚಿಕಿತ್ಸೆ ಪಡೆಯುವಿಕೆ ಹಾಗೂ ತಡೆಗಟ್ಟುವುದು ಅತ್ಯವಶ್ಯಕವಾಗಿದೆ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ರಾಜೇಂದ್ರ ಸಿ. ಬಸರಿಗಿಡ ತಿಳಿಸಿದರು.
ಜಿಲ್ಲಾಡಳಿತ ಗದಗ, ಜಿಲ್ಲಾ ಪಂಚಾಯಿತಿ ಗದಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ವಿಭಾಗ, ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜನರಲ್ ಮೆಡಿಸಿನ್ ಮುಖ್ಯಸ್ಥರಾದ ಡಾ. ಸಂಗಮೇಶ ಅಸೂಟಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ವಿಶ್ವ ಪಾರ್ಶ್ವವಾಯು ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾರ್ಶ್ವವಾಯು ಬಾಧಿತ ರೋಗಿಗಳು ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಕಾರ್ಯಕ್ರಮದ ಸದುಪಯೋಗ ಪಡೆಯಬೇಕು. ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಹೊಸ ಕಟ್ಟಡ ಕೊಠಡಿ ಸಂಖ್ಯೆ: 105ರಲ್ಲಿ ಪ್ರತಿನಿತ್ಯ ಮೆದುಳು ಆರೋಗ್ಯ ಕ್ಲಿನಿಕ್ಗೆ ಭೇಟಿ ನೀಡಿ ಚಿಕಿತ್ಸೆ, ಮನೋಸಾಮಾಜಿಕ ಬೆಂಬಲ, ಫಿಜಿಯೋಥೆರಪಿ ಹಾಗೂ ಸ್ಪೀಚ್ ಥೆರಪಿ ಸೌಲಭ್ಯವನ್ನು ಪಡೆದು ಪಾರ್ಶ್ವವಾಯುವಿನಿಂದ ಗುಣಮುಖವಾಗಲು ತಿಳಿಸಿದರು.
ಶ್ವಾಸಕೋಶ ತಜ್ಞರಾದ ಡಾ. ಇರ್ಫಾನ್ ಎಮ್ ಮಾತನಾಡಿ, ಸಮಾಜದಲ್ಲಿ ಮೂಢ ನಂಬಿಕೆಗಳಿಂದ ಆಚರಣೆಯಲ್ಲಿರುವ ವಿವಿಧ ಚಿಕಿತ್ಸೆಗೆ ಒಳಗಾಗಿ ರೋಗವನ್ನು ಹೆಚ್ಚು ಮಾಡಿಕೊಳ್ಳದೆ ತಜ್ಞ ವೈದ್ಯರನ್ನು ಭೇಟಿ ಮಾಡಿ ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಂಡು ಪಾರ್ಶ್ವವಾಯುವಿನಿಂದ ಮುಕ್ತರಾಗಲು ತಿಳಿಸಿದರು.
ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಎನ್.ಸಿ.ಡಿ ವಿಭಾಗದ ವೈದ್ಯಕೀಯ ಅಧಿಕಾರಿಗಳಾದ ಡಾ. ಅರ್ಪಿತಾ ಮಾತನಾಡಿ, ಗ್ರಾಮೀಣ ರೋಗಿಗಳು ಪ್ರಥಮ ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಎಂದು ತಿಳಿಸಿ, ಪಾರ್ಶ್ವವಾಯು ಕುರಿತು ಎಚ್ಚರಿಕೆಯಿಂದಿರಲು ತಿಳಿಸಿದರು.
ರವಿ ನಂದ್ಯಾಳ ಸ್ವಾಗತಿಸಿದರು. ರೋಣದ ಜಿಲ್ಲಾ ಸಂಯೋಜಕ ಪ್ರವೀಣ ಎಸ್ ನಿರೂಪಿಸಿದರು, ಕ್ಲಿನಿಕಲ್ ಸೈಕೋಲಜಿಸ್ಟ್ ರೇವಣಸಿದ್ದಪ್ಪ ವಂದಿಸಿದರು. ಈ ಸಂದರ್ಭದಲ್ಲಿ ಎನ್.ಟಿ.ಸಿ.ಪಿ ಕಾರ್ಯಕ್ರಮದ ಆಪ್ತ ಸಮಾಲೋಚಕರಾದ ರೇಷ್ಮಾ ನದಾಫ್, ಎನ್.ಸಿ.ಡಿ ವಿಭಾಗದ ಹಾಗೂ ಬಿ.ಎಸ್.ಸಿ ನರ್ಸಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಸಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ. ಅರುಣಕುಮಾರ ಮಾತನಾಡಿ, ವಿಶ್ವ ಪಾರ್ಶ್ವವಾಯು ದಿನ–2025ರ ಘೋಷವಾಕ್ಯ `ಪ್ರತಿ ನಿಮಿಷವೂ ಮುಖ್ಯ’ ಎಂಬುದರ ಕುರಿತು ಮಾತನಾಡಿ, ರೋಗಿಗಳಿಗೆ ಒಂದು ನಿಮಿಷವೂ ಸಹ ಬಂಗಾರದಂತಹ ಸಮಯವಾಗಿದ್ದು, ಸಮಯವನ್ನು ಕಳೆಯದೆ ಚಿಕಿತ್ಸೆಗೆ ತುರ್ತಾಗಿ ಸ್ಪಂದಿಸುವುದು ಅತೀ ಅವಶ್ಯಕ ಎಂದು ತಿಳಿಸಿದರು.


