ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಕೆಲವರು ರೆಡ್ಡಿ ಸಮಾಜದ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಧರ್ಮದ ಕಾಲಂನಲ್ಲಿ ಹಿಂದೂ ಹಾಗೂ ಉಪಜಾತಿ ಕಾಲಂನಲ್ಲಿ ರೆಡ್ಡಿ ಎಂದು ನಮೂದಿಸುವಂತೆ ಹೇಳುತ್ತಿದ್ದಾರೆ. ಆದರೆ, ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ರೆಡ್ಡಿ ಹಾಗೂ ಉಪಜಾತಿ ಕಾಲಂನಲ್ಲಿ ರೆಡ್ಡಿ ಎಂದು ನಮೂದಿಸುವಂತೆ ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ರಾಜ್ಯ ಗೌರವಾಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ನೂತನ ಜನಗಣತಿ ಪ್ರಾರಂಭವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಸದಸ್ಯತ್ವ ನೊಂದಣಿಯನ್ನು ಅತೀ ಶಿಘ್ರದಲ್ಲಿ ಮಾಡುವಂತೆ ಕರೆ ನೀಡಲಾಗುವುದು. ರೆಡ್ಡಿ ಸಮಾಜ ಪ್ರಾಚೀನ ಕಾಲದಿಂದ ಇಷ್ಟಲಿಂಗ ಪೂಜೆ ಮಾಡಿಕೊಂಡು ಬಂದಿದೆ. ನಮ್ಮದೇ ಆದ ವಿಧಿ-ವಿಧಾನದ ಸರಣಿ ಹೊಂದಿದ್ದೇವೆ. ಹುಟ್ಟಿದ ವಾರದಲ್ಲಿ ಲಿಂಗುಧಾರಣೆ ಮಾಡಿ ಪೂಜೆಸುತ್ತೇವೆ. ನಮ್ಮ ಸಮಾಜದ ಹೇಮರೆಡ್ಡಿ ಮಲ್ಲಮ್ಮನವರು ಶಿವನನ್ನು ಪ್ರತ್ಯಕ್ಷವಾಗಿ ಕಂಡಿದ್ದಾರೆ ಎಂದು ಹೇಳಿದರು.
ರಾಜ್ಯಾಧ್ಯಕ್ಷ ಶೇಖರಗೌಡ ಮಾಲೀಪಾಟೀಲ ಮಾತನಾಡಿ, ರೆಡ್ಡಿ ಸಮಾಜ ಸ್ವಾಮೀಜಿಗಳು ಕಳೆದ ಎರಡು ವಾರಗಳಿಂದ ಹಿಂದೂ ರೆಡ್ಡಿ ಎಂದು ನಮೂದಿಸಿ ಎಂದು ರಾಜ್ಯಾದ್ಯಂತ ಪ್ರವಾಸ ಮಾಡಿ ಹೇಳಿಕೆ ನೀಡುತ್ತಿದ್ದಾರೆ. ಆದರೆ, ನಾವು ನಮ್ಮ ಸಂಸ್ಕೃತಿ ಬಿಡಬಾರದು. ನಾವು ವೀರಶೈವ ರೆಡ್ಡಿ ಸಮಾಜದಲ್ಲಿ ಮುಂದುವರೆಯೋಣ. ಹೇಮರೆಡ್ಡಿ ಮಲ್ಲಮ್ಮನ ಆಶೀರ್ವಾದದಿಂದ ರೆಡ್ಡಿ ಸಮಾಜದವರು ತಮ್ಮ ಉಪ ಜೀವನವನ್ನು ನಡೆಸುತ್ತಿದ್ದಾರೆ. ಇದರಲ್ಲಿ ಯಾರ ಸಹಾಯ ಹಸ್ತ ಬೇಡ. ಯಾರೂ ಏನೇ ಹೇಳಿದರೂ ನಾವು ನಮ್ಮತನ ಬಿಟ್ಟುಕೊಡಬಾರದು ಎಂದು ಸಮಾಜದ ಮುಖಂಡರಿಗೆ ವಿನಂತಿ ಮಾಡಿದರು.
ಸಮೀಕ್ಷೆಯ ಪ್ರಕಾರ ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಜನಸಂಖ್ಯೆ ಕಡಿಮೆ ಆಗಿದೆ. ಈ ವರದಿ ಪ್ರಕಾರ ಕೇವಲ ೭೦ ಲಕ್ಷ ಜನಸಂಖ್ಯೆ ಬಂದಿದೆ. ಆದರೆ ೧ ಕೋಟಿಗೂ ಅಧಿಕ ಹೆಚ್ಚು ಜನ ರಾಜ್ಯದಲ್ಲಿದ್ದೇವೆ. ರಾಜ್ಯದಲ್ಲಿ ಮತ್ತೊಮ್ಮೆ ಸಮೀಕ್ಷೆ ಮಾಡಿ ನಮ್ಮ ನಿಜವಾದ ಜನಸಂಖ್ಯೆಯನ್ನು ಕಂಡುಹಿಡಿಯುತ್ತೇವೆ. ನಮ್ಮ ಸಮುದಾಯ ಅನೇಕ ಪಂಗಡಗಳಾಗಿ ಒಡೆದು ಹೋಗಿದೆ. ಇದು ಸರ್ಕಾರದ ತಪ್ಪು ಅಲ್ಲ. ರಾಜಕೀಯ ಶಕ್ತಿಗಾಗಿ ನಾವೆಲ್ಲರೂ ಒಂದಾಗಬೇಕು. ಇಲ್ಲದಿದ್ದರೆ ನಮ್ಮ ಮುಂದಿನ ಪೀಳಿಗೆ ನಮಗೆ ಶಾಪ ಹಾಕುವ ಸಮಯ ಬರುತ್ತದೆ. ಈ ಹಿನ್ನೆಲೆಯಲ್ಲಿ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಶೇಖರಗೌಡ ಮಾಲಿಪಾಟೀಲ, ಡಾ. ಕೋಟ್ರೇಶ ಬಿದರಿ, ರೇವಣಸಿದ್ದಪ್ಪ, ಡಾ. ವಾಮದೇವ, ರಘುನಾಥಗೌಡ ಕೆಂಪಲಿಂಗನಗೌಡ್ರ, ಕುಮಾರ ಗಡಗಿ, ಎಸ್.ಎಸ್ ಪಾಟೀಲ, ಫಕ್ಕಿರಪ್ಪ ಕಟ್ಟಿಮನಿ, ಶರಣಗೌಡ ಪಾಟೀಲ ಸರ್ಜಾಪೂರ, ಜಗದೀಶ, ಸುರೇಶ ಶಿರೋಳ, ಲೋಕೇಶ್, ಬಿ.ವ್ಹಿ. ಲೋಹಿತ್, ಅನಿಲಕುಮಾರ ತೆಗ್ಗಿನಮನಿ ಸೇರಿದಂತೆ ಅನೇಕರು ಅಪಸ್ಥಿತರಿದ್ದರು.
“ಈಗಾಗಲೇ ನಮ್ಮ ಜನಾಂಗ ತಮ್ಮ ಶಾಲಾ ದಾಖಲಾತಿಗಳಲ್ಲಿ ವೀರಶೈವ ರಡ್ಡಿ/ಲಿಂಗಾಯತ ರಡ್ಡಿ ದಾಖಲಾತಿ ಮಾಡಿಕೊಂಡಿದ್ದಾರೆ. ಆದರೆ, ಸರ್ಕಾರದಿಂದ ಕೊಡುವ ಜಾತಿ ಪ್ರಮಾಣಪತ್ರಗಳು ವೀರಶೈವ ಲಿಂಗಾಯತ ಇರುವುದರಿಂದ ನಮ್ಮ ಸಮುದಾಯದ ಇತ್ತೀಚಿನ ಪೀಳಿಗೆ `ರೆಡ್ಡಿ’ ಹೆಸರಿನ ಇನ್ನೊಂದು ಪಂಥದ ಹಾಗೂ ಇನ್ನೊಂದು ಪ್ರವರ್ಗದ ಜಾತಿ ಪ್ರಮಾಣಪತ್ರಗಳನ್ನು ಪಡೆಯುತ್ತಿರುವುದರಿಂದ ಅವರ ಶಿಕ್ಷಣ ಮತ್ತು ಉದ್ಯೋಗಕ್ಕೆ ಕಂಟಕವಾಗುತ್ತಿದೆ”
– ಡಾ. ವಾಮದೇವ.
ಸಮಾಜದ ಮೈಸೂರು ಜಿಲ್ಲಾಧ್ಯಕ್ಷ.