ವಿಜಯಸಾಕ್ಷಿ ಸುದ್ದಿ, ಗದಗ: ಏಷ್ಯಾ ಖಂಡದಲ್ಲಿಯೇ ಪ್ರಪ್ರಥಮವಾಗಿ ಸಹಕಾರ ಸಂಘವನ್ನು ಸ್ಥಾಪಿಸಿ, ದೇಶಕ್ಕೆ ಕೀರ್ತಿ ತಂದ ಸಹಕಾರ ರಂಗದ ಪಿತಾಮಹ ಕಣಗಿನಹಾಳದ ಯಜಮಾನರಾದ ಸಿದ್ದನಗೌಡ ಪಾಟೀಲ ಅವರ ಹೆಸರನ್ನು ನವೀಕೃತಗೊಂಡ ಗದಗ ರೈಲು ನಿಲ್ದಾಣಕ್ಕೆ ಇಡಬೇಕು ಎಂದು ಹಾಲುಮತ ಮಹಾಸಭಾದ ವತಿಯಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸಚಿವರು ಗುರುವಾರ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮನವಿ ಸಲ್ಲಿಸಿ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಮಾತನಾಡಿ, ಸಿದ್ದನಗೌಡ ಪಾಟೀಲರು ಮೇ. 8ರಂದು ಪ್ರಪ್ರಥಮ ಸಹಕಾರ ಸಂಘದ ನೋಂದಣಿ ಮಾಡಿಸಿದರು. ಅಲ್ಲದೇ ಅಂದಿನ ದಿನಗಳಲ್ಲಿ 2 ಸಾವಿರ ರೂಗಳನ್ನು ಠೇವಣಿ ಇಟ್ಟು ಸಂಘವನ್ನು ಸ್ಥಾಪಿಸಿ ಸಹಕಾರ ರಂಗಕ್ಕೆ ಮುನ್ನುಡಿ ಬರೆದಿದ್ದು ಇತಿಹಾಸ. ಅಂತಹ ಮಹನೀಯರ ಹೆಸರನ್ನು ಶಾಶ್ವತವಾಗಿರಿಸಲು ಹಾಗೂ ಅವರ ಸಾಧನೆಗಳನ್ನು ಜನರಿಗೆ ಪರಿಚಯಿಸಲು ನವೀಕೃತಗೊಂಡ ರೈಲು ನಿಲ್ದಾಣಕ್ಕೆ ಕಣಗಿನಹಾಳದ ಯಜಮಾನರಾದ ಸಿದ್ದನಗೌಡ ಪಾಟೀಲರ ಹೆಸರನ್ನು ಇಡುವುದು ಸೂಕ್ತವಾಗಿದೆ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಹಾಸಭಾದ ಜಿಲ್ಲಾ ಗೌರವಾಧ್ಯಕ್ಷ ನಾಗರಾಜ ಮೆಣಸಗಿ, ಉಪಾಧ್ಯಕ್ಷ ಸೋಮನಗೌಡ ಪಾಟೀಲ, ಕಾರ್ಯದರ್ಶಿ ಮುತ್ತು ಜಡಿ, ಪ್ರಮುಖರಾದ ಸತೀಶ ಗಿಡ್ಡಹನುಮಣ್ಣವರ, ಹನುಮಂತ ಗಿಡ್ಡಹನುಮಣ್ಣವರ, ಮಂಜುನಾಥ ಜಡಿ, ಮುತ್ತು ಮುಸಿಗೇರಿ, ಹೇಮಂತ ಗಿಡ್ಡಹನುಮಣ್ಣವರ, ಕುಮಾರ ಮಾರನಬಸರಿ, ರವಿ ವಗ್ಗನವರ, ಸಿದ್ದು ಯಾಳವಾಡದ, ಮುರುಗೇಶ ಕೋಗಲಿ, ಹನುಮಂತ ಕಳ್ಳಿ, ಈರಪ್ಪ ತಾಳಿ ಮುಂತಾದವರು ಉಪಸ್ಥಿತರಿದ್ದರು.