ಬೆಂಗಳೂರು:- ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಖ್ಯಾತ ಪತ್ರಕರ್ತ, ಲೇಖಕ ಮತ್ತು ಅಂಕಣಕಾರರಾಗಿದ್ದ ಟಿಜೆಎಸ್. ಜಾರ್ಜ್ ಅವರು ವಿಧಿವಶರಾಗಿದ್ದಾರೆ.
ಥೈಲ್ ಜಾಕೋಬ್ ಸೋನಿ ಜಾರ್ಜ್ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ. ಥೈಲ್ ಜಾಕೋಬ್ ಸೋನಿ ಜಾರ್ಜ್ ಅವರು ಟಿಜೆಎಸ್ ಜಾರ್ಜ್ ಎಂದೇ ಖ್ಯಾತರಾಗಿದ್ದರು. 1928 ಮೇ 7 ರಂದು ಕೇರಳದಲ್ಲಿ ಜನಿಸಿದ್ದ ಇವರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದುಕೊಂಡಿದ್ದರು. ನಂತರ ಮುಂಬೈನ ಫ್ರೀ ಪ್ರೆಸ್ ಜರ್ನಲ್ನಲ್ಲಿ ವೃತ್ತಿಜೀವನವನ್ನು ಆರಂಭಿಸಿದ್ದರು.
ಭಾರತೀಯ ಪತ್ರಿಕೋದ್ಯಮ ಸೇರಿದಂತೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅತ್ಯುತ್ತಮ ಕೊಡುಗೆ ಹಿನ್ನಲೆ 2011ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. 2019ರಲ್ಲಿ ಕೇರಳದ ಅತ್ಯುನ್ನತ ಮಾಧ್ಯಮದ ಸ್ವದೇಶಾಭಿಮಾನಿ ಕೇಸರಿ ಪ್ರಶಸ್ತಿಯನ್ನು ಸಹ ಪಡೆದಿದ್ದರು. ಅವರು ಹಾಂಗ್ ಕಾಂಗ್ನಲ್ಲಿ ಏಷ್ಯಾವೀಕ್ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಇವರ ನಿಧನಕ್ಕೆ ಹಲವು ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.