ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಮನುಕುಲದ ಕಲ್ಯಾಣಕ್ಕಾಗಿ ಹಲವು ಆಚಾರ್ಯರು, ಪ್ರವಾದಿಗಳು ಈ ಭೂವಿಯ ಮೇಲೆ ಅವತರಿಸಿ ಬಂದಿದ್ದಾರೆ. ಅಂತಹ ಪರಂಪರೆಯಲ್ಲಿ ಅವತರಿಸಿದ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಪರಶಿವನ ಆದೇಶದಂತೆ ಈ ಭೂತಲದಲ್ಲಿ ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರಚುರಪಡಿಸಿ ವೀರಶೈವ ಧರ್ಮವನ್ನು ನೆಲೆಗೊಳಿಸಿದ್ದಾರೆ ಎಂದು ಶಂಕ್ರಯ್ಯ ಹಿರೇಮಠ ಹೇಳಿದರು.
ಇಲ್ಲಿಯ ಹಿರೇಮಠದಲ್ಲಿ ರೇಣುಕಾಚಾರ್ಯ ಮಂದಿರ ಜೀರ್ಣೋದ್ಧಾರ ಸೇವಾ ಸಮಿತಿಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ನೆರೆಯ ತೆಲಂಗಾಣ ರಾಜ್ಯದ ಕೊಲ್ಲಿಪಾಕಿ ಸ್ವಯಂಭೂ ಸೋಮೇಶ್ವರ ಲಿಂಗದಿAದ ಅವತರಿಸಿದ ರೇಣುಕಾಚಾರ್ಯರು ಮಲಯಾಚಲಕ್ಕೆ ಬಂದು ಮಹಾಮುನಿ ಅಗಸ್ತ್ಯ ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿದ್ದಾರೆ. ಆ ಸಾರ ಸಂಗ್ರಹವೇ ಶ್ರೀ ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥವಾಗಿದೆ ಎಂದರು.
ಮುದಕಯ್ಯ ಪತ್ರಿಮಠ ಮಾತನಾಡಿ, ರೇಣುಕಾಚಾರ್ಯರು ಬೋಧಿಸಿರುವ ತತ್ವ ಸಿದ್ಧಾಂತಗಳು ಕೇವಲ ಬೋಧನೆಗೆ ಸೀಮಿತವಾಗದೇ ಸಮಾಜ ಸುಧಾರಣೆಗೆ ಸೋಪಾನವಾಗಿದೆ. ಕೊಲ್ಲಿಪಾಕಿಯಲ್ಲಿ 18 ಜಾತಿ-ಜನಾಂಗಗಳಿಗೂ ಮಠಗಳನ್ನು ಕಟ್ಟಿ, ಶಿಷ್ಯರನ್ನು ನೇಮಿಸಿ ಸಂಸ್ಕಾರ ನೀಡಿದ್ದು ರೇಣುಕಾಚಾರ್ಯರ ಸಮಾಜಿಕ ಕ್ರಾಂತಿಯ ಮೊದಲ ಹೆಜ್ಜೆಯಾಗಿದೆ. ಆ 18 ಮಠಗಳ ಕುರುಹು ಇಂದಿಗೂ ಕೊಲ್ಲಿಪಾಕಿ ಕ್ಷೇತ್ರದಲ್ಲಿವೆ ಎಂದರು.
ರೇಣುಕಾಚಾರ್ಯ ಮಹಾ ಮೂರ್ತಿಗೆ ಕೆ.ಸಿ. ಹಿರೇಮಠ ಅವರ ನೇತೃತ್ವದಲ್ಲಿ ವಿಧಿ ವಿಧಾನಗಳೊಂದಿಗೆ ಮಹಾರುದ್ರಾಭಿಷೇಕ, ಸಹಸ್ರ ನಾಮಾವಳಿ, ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆದವು. ತೋಟಯ್ಯ ಕಳ್ಳಿಮಠ, ರೇವಣಸಿದ್ದಯ್ಯ ನರಗುಂದಮಠ, ಕೊಟ್ರಯ್ಯ ಪತ್ರಿಮಠ, ನಿವೃತ್ತ ಶಿಕ್ಷಕ ಅಶೋಕ ಬೂದಿಹಾಳ, ಅಂದಾನಯ್ಯ ಪತ್ರಿಮಠ, ಚನ್ನವೀರಯ್ಯ ಪತ್ರಿಮಠ, ಬೂದಯ್ಯ ಕುಲಕರ್ಣಿ, ಷಡಕ್ಷರಯ್ಯ ಮುಳಕೊಂಪಿಮಠ, ಕೊಟ್ರಯ್ಯ ಮುಘಂಡಮಠ ಉಪಸ್ಥಿತರಿದ್ದರು.