ಚಿತ್ರದುರ್ಗ:- ಚಿತ್ರದುರ್ಗದ ವಿಆರ್ಡಸ್ ಬಡಾವಣೆಯ ನಿವಾಸದಲ್ಲಿ ರೇಣುಕಾಸ್ವಾಮಿ ಪುತ್ರನ ನಾಮಕರಣವು ಶಾಸ್ತ್ರೋಕ್ತವಾಗಿ ನೆರೆವೇರಿತು.
ನಟ ದರ್ಶನ್ & ಗ್ಯಾಂಗ್ನಿಂದ ಹತ್ಯೆಯಾದ ರೇಣುಕಾಸ್ವಾಮಿ ಮನೆಯಲ್ಲಿ ಮಗನ ಸಾವಿನ ಎಷ್ಟೋ ತಿಂಗಳ ನಂತರ ಸಂಭ್ರಮ ಮನೆ ಮಾಡಿದೆ. ರೇಣುಕಾಸ್ವಾಮಿ ಮಗನಿಗೆ ಇಂದು ನಾಮಕರಣ ಶಾಸ್ತ್ರ ಕಾರ್ಯಕ್ರಮ ನೆರೆವೇರಿತು. ದುಖಃದಲ್ಲಿದ್ದ ಸ್ವಾಮಿ ಕುಟುಂಬದಲ್ಲಿ ಇಂದು ಸಂಭ್ರಮದ ವಾತಾವರಣ ಮನೆ ಮಾಡಿದ್ದು, ಮಗನ ಸಾವಿನ 9 ತಿಂಗಳ ಬಳಿಕ ರೇಣುಕಾಸ್ವಾಮಿ ಮನೆಯಲ್ಲಿ ಸಂತಸದ ವಾತಾವರಣ ತುಂಬಿದೆ. ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡ ಹಾಗೂ ತಾಯಿ ರತ್ನಪ್ರಭ ಮೊಮ್ಮಗನನ್ನು ಎತ್ತಿಕೊಂಡು ಮುದ್ದಾಡಿದ್ದರು. ಮಗನ ತದ್ರೂಪಿಯಾದ ಮೊಮ್ಮನಿಗೆ ಮುತ್ತಿಟ್ಟು ಕಾಶಿನಾಥ್ ಶಿವನ ಗೌಡ ಸಂಭ್ರಮಿಸಿದರು.
ಜಂಗಮ ಸಂಪ್ರದಾಯದಂತೆ ನಾಮಕರಣ ಶಾಸ್ತ್ರ ನೆರವೇರಿಸಿದರು. ಮನೆ ಮುಂದೆ ತೊಟ್ಟಿಲು ಇಟ್ಟು ಸಿದ್ಧತೆ ನಡೆಸಿದ್ದು, ಕುಟುಂಬದ ಬಂಧುಗಳ ಸಮ್ಮುಖದಲ್ಲಿ ಮಗುವಿನ ನಾಮಕರಣ ಶಾಸ್ತ್ರ ನೆರವೇರಿತು. ರೇಣುಕಾಸ್ವಾಮಿ ಪುತ್ರನಿಗೆ `ಶಶಿಧರ್ ಸ್ವಾಮಿ’ ಎಂದು ರೇಣುಕಾಸ್ವಾಮಿ ಸಹೋದರಿ ಸುಚೇತ ಮಗುವಿಗೆ ಹೆಸರಿಟ್ಟರು. ಮಗುಗೆ ಜೇನುತುಪ್ಪ ತಿನ್ನಿಸಿ ನಾಮಕರಣ ನೆರವೇರಿಸಿದ ಸುಚೇತ, ಮಗುವಿನ ಕಿವಿಯಲ್ಲಿ ಹೆಸರು ಹೇಳಿದರು.
ಮೊಮ್ಮಗ ಶಶಿಧರ್ ಸ್ವಾಮಿ ಕೈ ಬೆರಳಿಗೆ ಉಂಗುರ ಹಾಕಿ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನ ಗೌಡ ಸಂಭ್ರಮಿಸಿದರು. ರತ್ನಪ್ರಭ ಮೊಮ್ಮಗನಿಗೆ ಬೆಳ್ಳಿ ಉಡುದಾರ ಹಾಕಿದರು. ಮಗುವನ್ನು ತೊಟ್ಟಿಲಿಗೆ ಹಾಕಿ ತೊಟ್ಟಿಲು ಶಾಸ್ತ್ರ ನೆರೆವೇರಿಸಿದ್ದು, ಕಾರ್ಯಕ್ರಮದಲ್ಲಿ ಬಂಧು ಮಿತ್ರರು ಭಾಗಿಯಾಗಿದ್ದರು.