ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಡಿಸೆಂಬರ್ 17ರಂದು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ನಲ್ಲಿ ಆರಂಭವಾಯಿತು. ಪ್ರಮುಖ ಆರೋಪಿಗಳಾದ ಪವಿತ್ರಾ ಗೌಡ ಹಾಗೂ ದರ್ಶನ್ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದರು.
ಪವಿತ್ರಾ ಗೌಡ ಪರ ವಕೀಲರು ಟಿವಿ, ರೇಡಿಯೋ, ದಿನಪತ್ರಿಕೆ, ಸಂಗೀತ, ಧ್ಯಾನ ಹಾಗೂ ಮನೆ ಊಟ ಸೌಲಭ್ಯ ಒದಗಿಸುವಂತೆ ಕೋರ್ಟ್ಗೆ ಮನವಿ ಸಲ್ಲಿಸಿದರು. ಈ ಮನವಿಗೆ ಸ್ಪಂದಿಸಿದ ನ್ಯಾಯಾಧೀಶರು ಪವಿತ್ರಾ ಗೌಡ ಇರುವ ಸೆಲ್ಗೆ ಟಿವಿ ಅಳವಡಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ದಿನಪತ್ರಿಕೆ ಮತ್ತು ಗ್ರಂಥಾಲಯದ ಪುಸ್ತಕಗಳನ್ನು ಒದಗಿಸುವಂತೆ ಆದೇಶಿಸಿದರು. ಇದಕ್ಕೂ ಮೊದಲು ದರ್ಶನ್ ಇರುವ ಸೆಲ್ಗೂ ಟಿವಿ ವ್ಯವಸ್ಥೆ ಕಲ್ಪಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಯಲ್ ಆರಂಭವಾಗಿದ್ದು, ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ್ರು ಮತ್ತು ತಾಯಿ ರತ್ನಪ್ರಭ ಅವರನ್ನು ವಿಚಾರಣೆ ನಡೆಸಲಾಯಿತು. ಅಪಹರಣ ನಡೆದ ದಿನದ ಬೆಳವಣಿಗೆಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಆರೋಪಿಗಳ ಪರ ವಕೀಲರು ಕೇಳಿದರು.
ಜೂನ್ 8ರ ನಂತರ ಮಗನ ಮೊಬೈಲ್ ನೋಡಿದಿರಾ, ಬೆಳಗ್ಗೆ ಟಿಫಿನ್ ಮಾಡಿದನಾ, ಸ್ನೇಹಿತರೊಂದಿಗೆ ಊಟಕ್ಕೆ ಹೋಗಿದ್ದನಾ, ಯಾವ ಉಡುಪು ಧರಿಸಿದ್ದನು ಎಂಬ ವಿಚಾರಗಳನ್ನು ಪೋಷಕರಿಗೆ ಕೇಳಲಾಯಿತು. 2024ರ ಜೂನ್ 9ರಂದು ಕೆಎಸ್ಆರ್ಟಿಸಿ ಬಸ್ ಹತ್ತಿದ ವಿಚಾರ ಹಾಗೂ ಕೆಲಸಕ್ಕೆ ಯೂನಿಫಾರ್ಮ್ ಧರಿಸುವ ಬಗ್ಗೆ ಸಹ ಪ್ರಶ್ನೆಗಳು ಕೇಳಲಾದವು. ವಿಚಾರಣೆಯನ್ನು ಇಂದು (ಡಿಸೆಂಬರ್ 18) ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಗಿದೆ.



