ದಾವಣಗೆರೆ:- ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಬೆನ್ನಲ್ಲೇ ಗುತ್ತಿಗೆದಾರರೊಬ್ಬರು ಸಿಎಂ ಸಿದ್ದರಾಮಯ್ಯರ ಬಳಿ ದಯಾಮರಣಕ್ಕಾಗಿ ಮನವಿ ಮಾಡಿರುವ ಅಂಶ ಬೆಳಕಿಗೆ ಬಂದಿದೆ.
ಕಾಮಗಾರಿ ಮಾಡಿದ ಹಣ ಬಿಡುಗಡೆ ಮಾಡದ ಹಿನ್ನಲೆಯಲ್ಲಿ ದಯಾಮರಣಕ್ಕೆ ಅವಕಾಶ ನೀಡುವಂತೆ ಸಿಎಂ ಸಿದ್ದರಾಮಯ್ಯಗೆ ಹರಿಹರ ನಗರದ ಮಹಮದ್ ಮಝರ್ ಎಂಬ ಗುತ್ತಿಗೆದಾರ ಪತ್ರ ಬರೆದಿದ್ದಾರೆ.
ಮಗಳ ಮದುವೆ ಮಾಡಬೇಕು ಹಣ ಕೊಡಿ ಇಲ್ಲ ದಯಾಮರಣ ಕೊಡಿ ಎಂದು ಮಝರ್ ಅಳಲು ತೋಡಿಕೊಂಡಿದ್ದಾರೆ.
ಹರಿಹರ ನಗರದಲ್ಲಿ SFC ವಿಶೇಷ ಅನುದಾನದಲ್ಲಿ ಗುತ್ತಿಗೆದಾರ ಮಹಮದ್ ಮಝರ್ ಅವರು ಒಟ್ಟು 25 ಲಕ್ಷ ರೂಪಾಯಿ ಕಾಮಗಾರಿ ಮಾಡಿದ್ದರು. ಹರಿಹರದ ಕೈಲಾಸ ನಗರದ ಖಬರಸ್ಥಾನ ಬಳಿ 20 ಲಕ್ಷ ವೆಚ್ಚದ ಶೌಚಾಲಯ ನಿರ್ಮಾಣ ಮಾಡಲಾಗಿದ್ದು, JC ಬಡಾವಣೆಯಲ್ಲಿ 5 ಲಕ್ಷ ವೆಚ್ಚದ ಚರಂಡಿ ನಿರ್ಮಾಣ ಮಾಡಲಾಗಿತ್ತು.
2022-23 ರಲ್ಲಿ ಕಾಮಗಾರಿ ಮಾಡಿದ್ದ ಬಿಲ್ ಇನ್ನೂ ಬಂದಿಲ್ಲ ಅಂತ ಕಚೇರಿಗಳಿಗೆ ಅಲೆದಾಟ ನಡೆಸಿದರೂ ಹಣ ಬಿಡುಗಡೆ ಆಗಿಲ್ಲ. ಸಾಲ ಮಾಡಿ ಕಾಮಗಾರಿ ಪೂರ್ಣ ಮಾಡಿದ್ದೇನೆ ಆದ್ರೂ ಹಣ ಬಿಡುಗಡೆ ಮಾಡಿಲ್ಲ ಅಂತ ಪತ್ರದಲ್ಲಿ ಗುತ್ತಿಗೆದಾರ ಅಳಲು ತೋಡಿಕೊಂಡಿದ್ದಾರೆ.
ಮಗಳ ಮದುವೆ ಮಾಡಲು ದಿನಾಂಕ ನಿಗದಿ ಮಾಡಬೇಕು. ಕೈನಲ್ಲಿ ಹಣ ಇಲ್ಲ. ಮತ್ತೊಂದು ಕಡೆ ಸಾಲಗಾರ ಕಾಟ ಅಂತ ಗುತ್ತಿಗೆದಾರ ತನ್ನ ಸಂಕಟ ತೋಡಿಕೊಂಡಿದ್ದು, ಹಣ ಕೊಡಿ ಇಲ್ಲ ಅಂದ್ರೆ ದಯಾಮರಣ ಕೊಡಿ ಎಂದು ಗುತ್ತಿಗೆದಾರ ಮಹಮದ್ ಮಝರ್ ಸಿಎಂ ಬಳಿ ಮನವಿ ಮಾಡಿದ್ದಾರೆ.