ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ 12 ಮತ್ತು 13ನೇ ವಾರ್ಡಿನ ಸೊಪ್ಪಿನಕೇರಿ ಮಾರ್ಗದ ರಸ್ತೆ ಹದಗೆಟ್ಟಿದ್ದು, ಪ್ರತಿದಿನ ಸಂಚರಿಸುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ರಸ್ತೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಗುರುವಾರ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಅವರಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಈ ರಸ್ತೆಯಲ್ಲಿ ಚರಂಡಿಯ ಕೊಳಕು ವಾಸನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಪ್ರತಿ ಶುಕ್ರವಾರ ಸಂತೆಗೆ ಬರುವ ಗ್ರಾಮೀಣ ಜನರಿಗೂ ತೊಂದರೆ ಉಂಟಾಗಿ ವ್ಯಾಪಾರ-ವಹಿವಾಟು ಕ್ಷೀಣಿಸಿದೆ. ಗಣೇಶ ಚತುರ್ಥಿಯ ಮೆರವಣಿಗೆ ಹಾದು ಹೋಗುವ ಮುಖ್ಯ ರಸ್ತೆ ಇದಾಗಿದ್ದು, ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಇದನ್ನು ಸರಿಪಡಿಸಬೇಕು ಎಂದು ವಿನಂತಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಮುಖ್ಯಾದಿಕಾರಿ ಮಹೇಶ ಹಡಪದ, ಪಟ್ಟಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆ ಹಾಯ್ದು ಹೋಗುವ ರಸ್ತೆಯನ್ನು ತಾತ್ಕಾಲಿಕವಾಗಿ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಪ್ರವೀಣ ಬಾಳಿಕಾಯಿ, ಶಿವಯೋಗಿ ಅಂಕಲಕೋಟಿ, ಅಮಿತ ಗುಡಗೇರಿ, ವೀರೇಶ ಚಿಂಚಲಿ, ಶಿವಾನಂದ ಮೆಕ್ಕಿ, ಚಿರಂಜೀವಿ ಕನವಳ್ಳಿ, ರವಿ ಹೊಗೆಸೊಪ್ಪಿನ, ಅನಿಲ ಹೊಟ್ಟಿ, ಮಲ್ಲು ಗುಡಗೇರಿ, ಕುಮಾರ ಅಣ್ಣಿಗೇರಿ ಮುಂತಾದವರಿದ್ದರು.