ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ರಸ್ತೆ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮತ್ತು ನಿವೃತ್ತ ನೌಕರರ ಬಾಕಿ ಉಳಿದಿರುವ ವೇತನ ವ್ಯತ್ಯಾಸದ ಹಣವನ್ನು ಜಂಟಿ ಸಮಿತಿಯ ಸಭೆಯಲ್ಲಿ ಮುಖ್ಯಮಂತ್ರಿಗಳ ಮನವೊಲಿಸಿ ಮಂಜೂರಾತಿಗೆ ಕ್ರಮ ಜರುಗಿಸಬೇಕೆಂದು ಕೆ.ಎಸ್.ಆರ್.ಟಿ.ಸಿ ಜಂಟಿ ಸಮಿತಿ ಹಾಗೂ ಎಸ್.ಸಿ/ಎಸ್.ಟಿ ನೌಕರರ ಸಂಘವು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರಿಗೆ ಮನವಿ ಸಲ್ಲಿಸಿತು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕೊಪ್ಪಳ ಹಾಗೂ ಜಂಟಿ ಸಮಿತಿಯ ಸಂಚಾಲಕ ಶಾಂತಣ್ಣ ಮುಳವಾಡ ಅವರ ನೇತೃತ್ವದಲ್ಲಿ ಸಚಿವರನ್ನು ಭೇಟಿಯಾದ ನಿಯೋಗವು, ರಸ್ತೆ ಸಾರಿಗೆ ನೌಕರರು ಹಗಲಿರುಳು ಪರಿಶ್ರಮಿಸಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರಿಗೆ ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಹಾಗೂ ನಿವೃತ್ತಿಯ ನಂತರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಮತ್ತು ಕುಟುಂಬ ನಿರ್ವಹಣೆಗೆ ಆರ್ಥಿಕವಾಗಿ ತೀವ್ರ ತೊಂದರೆ ಅನುಭವಿಸುತ್ತಿರುವ ನೌಕರರ ಬೇಡಿಕೆಯನ್ನು ಪರಿಶೀಲಿಸಿ ಬೇಡಿಕೆ ಈಡೇರಿಸಬೇಕೆಂದು ಮನವಿಯಲ್ಲಿ ವಿವರಿಸಿದೆ.
ಮನವಿ ಅರ್ಪಣೆಯ ಸಂದರ್ಭದಲ್ಲಿ ರಾಮೇನಹಳ್ಳಿ, ಸಂಗಣ್ಣವರ, ಅಯ್ಯನಗೌಡರ, ಪೂಜಾರ, ಬಿ.ಎ. ದೊಡ್ಡಮನಿ, ಮಂಜು ಪೂಜಾರ, ಜಗದೀಶ ಆದಿ ಮುಂತಾದವರಿದ್ದರು.


