ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಗೋರ್ ಸೇನಾ ಸಂಘಟನೆಯ ಗದಗ ಘಟಕದ ವತಿಯಿಂದ ಪರಿಶಿಷ್ಟ ಜಾತಿ ಉಪವರ್ಗೀಕರಣ (ಒಳಮಿಸಲಾತಿ) ಸಮೀಕ್ಷೆಯ ಲೋಪದೋಷಗಳನ್ನು ಸರಿಪಡಿಸುವಂತೆ ಸಮಿತಿಯ ರಾಜ್ಯ ಕಾರ್ಯದರ್ಶಿ ರವಿಕಾಂತ ಅಂಗಡಿ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರವಿಕಾಂತ ಅಂಗಡಿ, ನ್ಯಾಯಮೂರ್ತಿ ನಾಗಮೋಹನದಾಸರವರ ವರದಿಯನ್ನು ಆಧರಿಸಿ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳ ಒಳಮಿಸಲಾತಿಗಾಗಿ ರಾಜ್ಯಾದ್ಯಂತ ಸಮೀಕ್ಷೆ ಕೈಗೊಂಡಿದ್ದು, ಈ ಸಮೀಕ್ಷೆಯಲ್ಲಿ ಹಲವಾರು ಸಮಸ್ಯೆಗಳು ಉಂಟಾಗಿರುವುದಾಗಿ ತಿಳಿಸಿದ್ದಾರೆ.
ಸಮೀಕ್ಷೆಯಲ್ಲಿ ರೇಷನ್ ಕಾರ್ಡ್ನಲ್ಲಿ ಹೆಸರು ಇಲ್ಲದಿದ್ದರೆ, ಕೇವಲ ಆಧಾರ್ ಕಾರ್ಡ್ ಹೊಂದಿರುವ ಕುಟುಂಬದ ಇಬ್ಬರು ಸದಸ್ಯರನ್ನು ಮಾತ್ರ ಸೇರಿಸಬಹುದಾಗಿದೆ. ಆದರೆ, ಇದರಿಂದ ಹಲವಾರು ಕುಟುಂಬದ ಸದಸ್ಯರು ಸಮೀಕ್ಷೆಯಿಂದ ಹೊರಗುಳಿಯುವ ಸಂಭವವಿದೆ. ಚುನಾವಣಾ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಜನ್ಮ ಪ್ರಮಾಣಪತ್ರ, ನಿವಾಸ ಪ್ರಮಾಣಪತ್ರ, ಡ್ರೈವಿಂಗ್ ಲೈಸೆನ್ಸ್, ಶಾಲಾ ದೃಢೀಕರಣ ಪತ್ರಗಳಂತಹ ದಾಖಲೆಗಳ ಆಧಾರದಿಂದ ಅಧಿಕ ಸದಸ್ಯರನ್ನು ಸೇರಿಸಲು ಅವಕಾಶ ನೀಡಬೇಕೆಂದು ಅವರು ಒತ್ತಾಯಿಸಿದರು.
ಸರ್ಕಾರಿ ಉದ್ಯೋಗಿಗಳ ಕುಟುಂಬಗಳಲ್ಲಿ ರೇಷನ್ ಕಾರ್ಡ್ ಇಲ್ಲದ ಹಲವಾರು ಸದಸ್ಯರಿದ್ದು, ಕೇವಲ ಆಧಾರ್ ಆಧಾರಿತವಾಗಿ ಇಬ್ಬರನ್ನು ಮಾತ್ರ ಸೇರಿಸುವ ವ್ಯವಸ್ಥೆ ಅನ್ಯಾಯವಾಗಿದೆ. ಈ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಕೆಲವು ಹಳ್ಳಿ, ಹಟ್ಟಿ, ತಾಂಡಾಗಳಲ್ಲಿ ಇಂಟರ್ನೆಟ್ ಸಂಪರ್ಕದ ಕೊರತೆಯಿಂದ ಸಮೀಕ್ಷೆ ಪ್ರಾರಂಭವಾಗಿಲ್ಲ. ಕೆಲವರು ಪ್ರಾಮಾಣಿಕತೆಯ ಕೊರತೆಯಿಂದ ಸಮೀಕ್ಷೆಯನ್ನು ಸರಿಯಾಗಿ ನಡೆಸುತ್ತಿಲ್ಲ. ಅಂತಹ ಸಿಬ್ಬಂದಿಯನ್ನು ಬೇಗನೆ ಬದಲಾಯಿಸಬೇಕು ಮತ್ತು ಸಮರ್ಪಕ ಹಾಗೂ ನಿಷ್ಠೆಯ ಸಮೀಕ್ಷೆಗೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಪಾಂಡು ಚವ್ಹಾಣ, ಧನಸಿಂಗ್ ನಾಯಕ, ಕುಬೇರಪ್ಪ ಪವಾರ, ಲೋಕೇಶ್ ಕಟ್ಟಿಮಣಿ, ವಿಠ್ಠಲ ತೋಟದ, ಮೋತಿಲಾಲ್ ಮಾಳಗಿಮಣಿ, ವೆಂಕಟೇಶ್ ನಾಯಕ, ಸೋಮಪ್ಪ ಲಮಾಣಿ, ತಾವರೆಪ್ಪ ಲಮಾಣಿ, ರಾಜು ಪವಾರ, ರವಿ ನಾಯಕ, ಕವಿತಾ ತೋಟದ ಸೇರಿದಂತೆ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.
ಲಿಂಗಸುಗೂರು ತಾಲೂಕಿನ ಹೆಗ್ಗಪುರ ತಾಂಡಾದಲ್ಲಿ ಬಂಜಾರ/ಲಂಬಾಣಿ ಸಮುದಾಯದವರನ್ನು ‘ಆದಿ ದ್ರಾವಿಡ’, ‘ಆದಿ ಆಂಧ್ರ’ ಎಂಬಂತೆ ತಪ್ಪಾಗಿ ದಾಖಲಿಸಲಾಗಿದ್ದು, ಇದನ್ನು ತಕ್ಷಣ ಸರಿಪಡಿಸಬೇಕು ಮತ್ತು ತಪ್ಪು ಮಾಡಿದ ಸಿಬ್ಬಂದಿ ಸೋಮಪ್ಪ ಎಂಬುವರ ಮೇಲೆ ಕಾನೂನು ಕ್ರಮ ಜರುಗಿಸಿ, ಅಲ್ಲಿ ಮತ್ತೊಮ್ಮೆ ಸಮೀಕ್ಷೆ ನಡೆಸಬೇಕು ಎಂದು ರವಿಕಾಂತ ಅಂಗಡಿ ಒತ್ತಾಯಿಸಿದರು.