ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಾ ಭಾರತೀಯ ಕಿಸಾನ್ ಸಂಘವು ಬೆಳೆ ವಿಮೆ, ಬೆಳೆ ಪರಿಹಾರ ಮಂಜೂರು ಮಾಡುವಂತೆ ಅಧ್ಯಕ್ಷ ಅಜಯ ಕರಿಗೌಡ್ರ ಅವರ ನೇತೃತ್ವದಲ್ಲಿ ತಹಸೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಅರ್ಪಿಸಿದರು.
ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಗ್ರೇಡ್ 2 ತಹಸೀಲ್ದಾರ ಮಂಜುನಾಥ ಅಮಾಸಿ ಅವರಿಗೆ ಮನವಿ ಸಲ್ಲಿಸಿದ ಭಾರತೀಯ ಕಿಸಾನ್ ಸಂಘದ ತಾಲೂಕಾಧ್ಯಕ್ಷ ಅಜಯ ಕರೀಗೌಡ್ರ ಮಾತನಾಡಿ, ಕೊಳವೆ ಬಾವಿಗಳು ಬತ್ತಿಹೋಗಿ, ನೀರಾವರಿ ಸೌಲಭ್ಯದಿಂದ ವಂಚಿತವಾಗಿದ್ದರಿಂದ ರೈತರ ಜಮೀನುಗಳಲ್ಲಿ ಬೆಳೆ ಹಾನಿಯಾಗಿದ್ದು, ಇದಕ್ಕಾಗಿ ಬೆಳೆ ವಿಮೆ ಮತ್ತು ಬೆಳೆಪರಿಹಾರ ಮಂಜೂರು ಮಾಡಬೇಕೆಂದು ವಿನಂತಿಸಿದರು.
ತಾಲೂಕಿನ ದೊಡ್ದುರ, ಸೂರಣಗಿ, ಉಳ್ಳಟ್ಟಿ, ಉಂಡೇನಹಳ್ಳಿ, ಶ್ಯಾಬಳ, ಶಿಗ್ಲಿ, ಗೋವನಾಳ, ಮುನಿಯನತಾಂಡಾ, ದೊಡುರ ತಾಂಡಾ, ಸುವರ್ಣಗಿರಿ, ಅಡರಕಟ್ಟಿ, ಲಕ್ಷ್ಮೇಶ್ವರ, ಹರದಗಟ್ಟಿ, ಹಿರೇಮಲ್ಲಾಪುರ, ವಡೆಯರಮಲ್ಲಾಪುರ, ಗುಲಗಂಜಿಕೊಪ್ಪ, ರಾಮಗೇರಿ, ಯಳವತ್ತಿ, ಯತ್ತಿನಹಳ್ಳಿ, ಮಾಡಳ್ಳಿ ಈ ಗ್ರಾಮಗಳಲ್ಲಿನ ನೀರಾವರಿ ಜಮೀನುಗಳಲ್ಲಿರುವ ಕೊಳವೆಬಾವಿಗಳು ಬತ್ತಿಹೋಗಿವೆ. ಇದರಿಂದ ಪ್ರಮುಖ ಬೆಳೆಗಳಾದ ಶೇಂಗಾ, ಅಲಸಂದಿ, ಜೋಳ, ಗೋದಿ ಇವುಗಳು ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯದೆ ರೈತರು ಹಾನಿ ಅನುಭವಿಸುವಂತಾಗಿದೆ ಎಂದರು.
ಸಂಘದ ತಾಲೂಕಾ ಕಾರ್ಯದರ್ಶಿ ,ಲಕ್ಷ್ಮಣ ಲಮಾಣಿ ಮಾತನಾಡಿ, ರೈತರು ಸಂಕಷ್ಟದಲ್ಲಿದ್ದು, ಈ ಬಾರಿ ಅಧಿಕ ಪ್ರಮಾಣದ ಬೇಸಿಗೆ ಇರುವದರಿಂದ ಹೊಲದಲ್ಲಿನ ಬೆಳೆಗಳು ಒಣಗಿ ಹೋಗುತ್ತಿವೆ. ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸಿ ಬೆಳೆ ವಿಮೆ, ಬೆಳೆ ಪರಿಹಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಗಂಗಾಧರ ಬಂಕಾಪೂರ, ಸುರೇಶ ಬಾಗಲದ, ಅಲ್ತಾಫ ನೂರಬೇಗ ಮೀರಜ, ದಾದಾಪೀರ ನೂರಬೇಗ ಮೀರಜ, ಮಲ್ಲಿಕಾರ್ಜುನ ಗೊರವರ, ರಾಮಪ್ಪ ಲಮಾಣಿ, ನಿಂಗನಗೌಡ್ರ ಪಾಟೀಲ್, ರಮೇಶ ಹುಲಕೋಟಿ, ರಮೇಶ ಕೋಳಿವಾಡ, ಮಹಾಲಿಂಗಪ್ಪ ನಾದಿಗಟ್ಟಿ, ಶಿವಮೂರ್ತೆಪ್ಪ ಈಳಿಗೇರ, ಚಂದ್ರಗೌಡ ಕರೆಗೌಡ್ರ, ವಸಂತಗೌಡ್ರ ಕರೆಗೌಡ್ರ, ಮುತ್ಯಾರ ನೂರಮಿರ್ಜಾ ಮುಂತಾದವರಿದ್ದರು.