ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಗದಗ ಅಗಸಿಯಿಂದ ಶಿಗ್ಲಿ ನಾಕಾದವರೆಗೆ 2 ವರ್ಷಗಳ ಹಿಂದೆಯೇ ಹದಗೆಟ್ಟ ಕೈಗಾ–ಇಳಕಲ್ ರಾಜ್ಯ ಹೆದ್ದಾರಿಯನ್ನು ಸಿ.ಸಿ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಿದ ಸಂದರ್ಭದಲ್ಲಿ ರಸ್ತೆ ವಿಭಜಕಗಳನ್ನು (ಡಿವೈಡರ್) ಅಳವಡಿಸಬೇಕಾಗಿತ್ತು. ಆದರೆ ಕಾಮಗಾರಿ ಮಾಡದೇ ಕೈ ತೊಳೆದುಕೊಂಡ ಗುತ್ತಿಗೆದಾರರಿಂದ ಕೂಡಲೇ ಡಿವೈಡ್ರ ಕಾಮಗಾರಿ ಮಾಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಜಿಲ್ಲಾದ್ಯಕ್ಷ ಶರಣು ಗೋಡಿ ನೇತೃತ್ವದಲ್ಲಿ ಶುಕ್ರವಾರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ಬಸ್ ಸ್ಟಾಂಡ್ ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದ ಕರವೇ ಮುಖಂಡರು ಮಾತನಾಡಿ, 2 ವರ್ಷಗಳ ಹಿಂದೆಯೇ ಪಿಡಬ್ಲೂಡಿಯಿಂದ ಕೈಗೊಂಡ ರಸ್ತೆ ಅಭಿವೃದ್ಧಿ ಕಾಮಗಾರಿ ಸಂದರ್ಭದಲ್ಲಿ ಕ್ರಿಯಾಯೋಜನೆಯಂತೆ ಡಿವೈಡರ್ ಅಳವಡಿಸಬೇಕಾಗಿತ್ತು. 2 ವರ್ಷಗಳಿಂದ ಈ ರಸ್ತೆಯಲ್ಲಿ ಡಿವೈಡರ್ ಇಲ್ಲದ್ದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ವಾಹನ ಸವಾರರು ಅಡ್ಡಾದಿಡ್ಡಿ, ನಿಯಮ ಮೀರಿ ಸಂಚರಿಸಲು ಅವಕಾಶ ಮಾಡಿಕೊಟ್ಟಂತಾಗಿದೆ. ನಿತ್ಯ ಸಾಕಷ್ಟು ಅವಘಡ, ಕಿರಿಕಿರಿ ಉಂಟಾಗುತ್ತಿದೆ. ಗುತ್ತಿಗೆದಾರರಿಂದ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಪಿಡಬ್ಲೂಡಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾ ಕಾರ್ಯಾಧ್ಯಕ್ಷ ಇಸ್ಮಾಯಿಲ್ ಆಡೂರ, ತಾಲೂಕಾಧ್ಯಕ್ಷ ನಾಗೇಶ ಅಮರಾಪುರ, ಉಪಾಧ್ಯಕ್ಷ ಶರಣಪ್ಪ ಬಸಾಪುರ, ಕಾರ್ಯದರ್ಶಿ ಕೈಸರ ಮಹಮ್ಮದಅಲಿ, ಖಾನಸಾಬ್ ಮನಿಯಾರ, ಗೌಸ ಮಂಜಲಾಪುರ, ಬಸವರಾಜ ಅಮರಾಪುರ, ದುದ್ದು ತೋಟದ, ಗೌಸ ಹುಲುಗೂರ, ಮಹಮ್ಮದ್ಅಲಿ ಶಿಗ್ಗಾಂವ, ಮಾಂತೇಶ ಉಮಚಗಿ, ರಫೀಕ್ ಗುಡ್ಡದ, ಆಶಿಪ್ ದೊಡ್ಮನಿ, ಸಂಜೀವ ಅಮರಾಪುರ, ಚಂದ್ರಕಾಂತ ರೊಟ್ಟಿಗವಾಡ, ಲೆಂಕೆಪ್ಪ ಶೆರಸೂರಿ ಸುಲೇಮಾನ ಬಾರಿಗಿಡದ, ಹಜರತ್ಅಲಿ ಮನಿಯಾರ್, ಮಲ್ಲಿಕ್ ಗುಡ್ಡದ, ಇಮ್ರಾನ್ ದರೆಬಾನ, ಮಲ್ಲಿಕ್ ಗದವಾಲ, ನವಾಜ್ಅತ್ತಾರ ಹುಬ್ಬಳ್ಳಿ, ವೆಂಕಪ್ಪ ಲಮಾಣಿ, ಶರಣಪ್ಪ ಕಳ್ಳಿಹಾಳ, ಪೀರ್ಸಾಬ್ ರಿತ್ತಿ ಮುಂತಾದವರಿದ್ದರು. ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರರ ಮಲ್ಲಿಕಾರ್ಜುನ ಮೈತ್ರಿ ಮನವಿ ಸ್ವೀಕರಿಸಿದರು.