ವಿಜಯಸಾಕ್ಷಿ ಸುದ್ದಿ, ಗದಗ: 2025ನೇ ಸಾಲಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ನಿಮಿತ್ತ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ನೋಂದಾಯಿಸಿಕೊಳ್ಳುವಂತೆ ಸಮಸ್ತ ಪದವೀಧರ ಬಂಧುಗಳಿಗೆ ಉತ್ತರ ಕರ್ನಾಟಕ ಪದವೀಧರ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಎಸ್. ನಾಗರಕಟ್ಟಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಮಸ್ತ ಪದವೀಧರರು ಚುನಾವಣಾ ಇಲಾಖೆ ನೀಡಿದ ಕಾಲಾವಕಾಶದಲ್ಲಿ ತಮ್ಮ ಹೆಸರುಗಳನ್ನು ಮತದಾರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಸರಿಯಾಗಿ ಜಾಗೃತಿ ಮೂಡದಿರುವುದು, ಚುನಾವಣಾ ಇಲಾಖೆಯ ಕಠಿಣ ನಿಯಮಗಳು ಹಾಗೂ ಜನಪ್ರತಿನಿಧಿಗಳ ತಾತ್ಸಾರ ಭಾವನೆಯಿಂದ ನಿಗದಿತ ಗುರಿ ತಲುಪಲಾಗಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ.
ಸಮಸ್ತ ಪದವೀಧರರಿಗೆ ಸಂವಿಧಾನವು ಮತದಾನದ ಹಕ್ಕು ನೀಡಿ ಗೌರವಿಸಿದೆ. ಇಂತಹ ಮತದಾನ ಹಕ್ಕನ್ನು ನಾವು ಮೊಟಕುಗಳಿಸಿಕೊಳ್ಳಬಾರದು. ಪದವೀಧರರು ಸ್ವಲ್ಪ ಸಮಯವನ್ನು ಮೀಸಲಿಟ್ಟು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಗಳನ್ನು ನೋಂದಾಯಿಸಿಕೊಳ್ಳಬೇಕು. ವಿದ್ಯಾವಂತರಾದ ನಾವೇ ಮತದಾನದಿಂದ ಹಿಂದೆ ಸರಿದರೆ ಉತ್ತಮ ಸಮಾಜ ನಿರ್ಮಾಣ ಮಾಡುವುದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ.
ಸಮಸ್ತ ಪದವೀಧರ ಬಂಧುಗಳು ಆದಷ್ಟು ಬೇಗ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕೆಂದು ಎಂ.ಎಸ್. ನಾಗರಕಟ್ಟಿ ಮನವಿ ಮಾಡಿದ್ದಾರೆ.



