ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಈ ಭಾಗದಿಂದ ಸಾಕಷ್ಟು ಭಕ್ತರು ದರ್ಶನಕ್ಕೆ ತೆರಳುತ್ತಿದ್ದು, ಬಸ್ ಸೌಕರ್ಯ ಕಡಿಮೆ ಇರುವುದರಿಂದ ಲಕ್ಷ್ಮೇಶ್ವರ ಬಸ್ ನಿಲ್ದಾಣದಿಂದ ಶ್ರೀ ಕ್ಷೇತ್ರ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಹೊಸ ಮಾರ್ಗವಾಗಿ ಬಸ್ ಸಂಚಾರ ಆರಂಭಿಸಬೇಕೆಂದು ತಾಲೂಕಿನ ಗುಡೇನಕಟ್ಟಿ, ಮಂಟೂರ, ಬಂಡಿವಾಡ, ನಾಗರಹಳ್ಳಿ ಗ್ರಾಮಸ್ಥರು ಲಕ್ಷ್ಮೇಶ್ವರ ಘಟಕದ ವ್ಯವಸ್ಥಾಪಕಿ ಸವಿತಾ ಆದಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿನ ಜನರು ಪ್ರಯಾಣಕ್ಕೆ ಅನುಕೂಲವಾಗುವಂತೆ ಲಕ್ಷ್ಮೇಶ್ವರ, ರಾಮಗೇರಿ, ಪಶುಪತಿಹಾಳ, ಸಂಶಿ, ಶಿರೂರ, ಕುಂದಗೋಳ, ಗುಡೇನಕಟ್ಟಿ, ಬಂಡಿವಾಡ, ಕುಸುಗಲ್, ಬ್ಯಾಹಟ್ಟಿ, ತಿರ್ಲಾಪುರ, ಅಳಗವಾಡಿ, ಅಂಚಿನಹಂಚಿನಾಳ, ಹಿರೆಕುಂಬಿ, ಉಗುರುಗೋಳ ಮಾರ್ಗವಾಗಿ ಸವದತ್ತಿಯ ಯಲ್ಲಮ್ಮನ ಗುಡ್ಡಕ್ಕೆ ಪ್ರತಿದಿನ 2ರಿಂದ 3 ಬಸ್ಸುಗಳನ್ನು ಓಡಿಸಬೇಕೆಂದು ಮನವಿಯಲ್ಲಿ ವಿನಂತಿಸಿದರು.
ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದ ಘಟಕ ವ್ಯವಸ್ಥಾಪಕಿ ಸವಿತಾ ಆದಿ, ಶೀಘ್ರದಲ್ಲಿಯೇ ನಿಮ್ಮ ಬೇಡಿಕೆಯನ್ನು ಈಡೇರಿಸಿ ಪ್ರಯಾಣಿಕರಿಗೆ ಹಾಗೂ ಯಲ್ಲಮ್ಮನ ಗುಡ್ಡಕ್ಕೆ ಹೋಗುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಬಸ್ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಿರಕಪ್ಪ ಮಲ್ಲಿಗವಾಡ, ಬಸವರಾಜ ಯೋಗಪ್ಪನವರ, ನೇಮಿನಾಥ ರಘುನವರ, ಭರತೇಶ್ ಮಲ್ಲಿಗವಾಡ, ಚನ್ನಬಸಪ್ಪ ಸಿದ್ದುನವರ, ಶಿವಪ್ಪ ಕಟಗಿ, ಯಮನಪ್ಪ ಮಾದರ, ನಾಗಪ್ಪ ಸಿದ್ದಣ್ಣವರ ಮುಂತಾದವರು ಹಾಜರಿದ್ದರು.


