ವಿಜಯಸಾಕ್ಷಿ ಸುದ್ದಿ, ಧಾರವಾಡ: ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ವಿಭಾಗ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಅತ್ಯುತ್ತಮವಾದ ಸಂಶೋಧನೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಒಳ್ಳೆಯ ಸಂಶೋಧನೆಗಳು ರಾಷ್ಟ್ರದ ಅಭಿವೃದ್ಧಿಗೆ ಸಹಾಯಕವಾಗುತ್ತವೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯಿದೆ ಎಂದು ಬೆಂಗಳೂರಿನ ಕಿಟ್ಸ್ ಸಂಸ್ಥೆಯ ವ್ಯವಸ್ಥಾಪಕಿ ಅರ್ಚನಾ ಸಿ ನುಡಿದರು.
ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್), ಸ್ಟಾರ್ಟ್ಅಪ್ ಕರ್ನಾಟಕ, ಕಿಟ್ಸ್ ಸಂಸ್ಥೆ, ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ವಿಭಾಗ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಇವರ ಸಹಯೋಗದಲ್ಲಿ ಧಾರವಾಡದ ನಗರದಲ್ಲಿ ಫೆ.24ರಂದು ಆಯೋಜಿಸಿದ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಒತ್ತಡ, ಖಿನ್ನತೆ ಹಾಗೂ ಆತಂಕ ಕಾಯಿಲೆ ಮುಂತಾದ ಮಾನಸಿಕ ಕಾಯಿಲೆಗಳಿಗೆ ಕೃತಕ ಬುದ್ಧಿಮತ್ತೆಯಿಂದ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ಸಂಶೋಧನಾ ಚಟುವಟಿಕೆಗಳು ಪ್ರಾರಂಭವಿಸುವಲ್ಲಿ ವಿವಿಧ ಸಂಸ್ಥೆಗಳು ಮುಂದೆ ಬರುತ್ತಿವೆ. ಡಿಮ್ಹಾನ್ಸ್ ಸಂಸ್ಥೆಯು ಈ ನಿಟ್ಟಿನಲ್ಲಿ ಸಂಶೋಧನಾ ಚಟುವಟಿಕೆಗಳನ್ನು ಪ್ರಾರಂಭಿಸಿರುವುದು ಸಂತೋಷದ ವಿಷಯ. ಈ ಕಾರ್ಯಾಗಾರದಲ್ಲಿ ಭಾಗವಹಿಸಿದ ಸಂಶೋಧಕರು ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವ ಮಾಹಿತಿ ಪಡೆದುಕೊಂಡು ಹೊಸ ಸಂಶೋಧನೆಗಳನ್ನು ಮಾಡಲು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕೆಂದರು.
ಡಿಮ್ಹಾನ್ಸ್ ನಿರ್ದೇಶಕ ಡಾ. ಅರುಣಕುಮಾರ ಸಿ ಮಾತನಾಡಿ, ಇಂದು ನೂತನ ಸಂಶೋಧನೆಗಳು ಮತ್ತು ಸಮಾಜದ ಒಳಿತಿಗಾಗಿ ಬೇಕಾಗಿರುವ ಸಂಶೋಧನೆಗಳು ಅಗತ್ಯವಾಗಿವೆ. ಸಂಶೋಧನಾ ವಿದ್ಯಾರ್ಥಿಗಳು, ವೃತ್ತಿಪರ ಸಂಶೋಧಕರು, ವಿದ್ಯಾರ್ಥಿಗಳು ಹೊಸ ಸಂಶೋಧನೆಗಳಿಗೆ ಇರುವ ಸಾಕಷ್ಟು ಅವಕಾಶಗಳನ್ನು ತಿಳಿದುಕೊಳ್ಳಬೇಕಾಗಿದೆ. ಡಿಮ್ಹಾನ್ಸ್ ಸಂಸ್ಥೆ ಹಾಗೂ ಇತರ ಸಂಸ್ಥೆಗಳಿಂದ ಆಯೋಜಿದ ಇಂತಹ ಕಾರ್ಯಾಗಾರದ ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಸಂಶೋಧನೆಗಳು ಕೇವಲ ಸಂಶೋಧನಾ ಲೇಖನಗಳನ್ನು ಪ್ರಕಟಿಸುವುದಲ್ಲ. ಸಂಶೋಧನೆ ಹೊಸ ಜ್ಞಾನವನ್ನು ಕೊಡುವುಂತಹದ್ದು, ಸಮಸ್ಯೆಗಳಿಗೆ ಪರಿಹಾರ ಹುಡುಕಿ ಸಮಾಜಕ್ಕೆ ಒಳ್ಳೆಯ ಕೊಡುಗೆಗಳನ್ನು ನೀಡುವುದು ಒಳ್ಳೆಯ ಸಂಶೋಧನೆಯ ಲಕ್ಷಣವಾಗಿದೆ ಎಂದರು.
ಡಿಮ್ಹಾನ್ಸ್ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ಪದವಿ ವಿದ್ಯಾರ್ಥಿಗಳು, ಸ್ನಾತ್ತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಯುವ ಉದ್ಯಮಿಗಳಿಗೆ ಕಾರ್ಯಾಗಾರದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಭ್ಯವಿರುವ ಸಂಶೋಧನಾ ಯೋಜನೆಗಳಿಗೆ ಇರುವ ಹಣಕಾಸಿನ ಲಭ್ಯತೆ ಹಾಗೂ ಇತರ ಅವಶ್ಯಕ ಬರವಣೆಗೆಗಳ ಕುರಿತು ತಿಳಿಸಿಕೊಡುವುದು ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದ್ದು ಇವುಗಳನ್ನು ಸರಿಯಾಗಿ ಮಾಡಿಕೊಂಡು ಉತ್ತಮ ಸಂಶೋಧಕರಾಗಬೇಕು. ಸಮಾಜದಲ್ಲಿ ಒಳ್ಳೆಯ ಸಂಶೋಧನೆಗಳಿಗೆ ಬೇಡಿಕೆಯಿದೆ. ಸಂಕೀರ್ಣ ಸ್ವರೂಪದ ಸಮಸ್ಯೆಗಳಿಗೆ ಉತ್ತಮವಾದ ಸಂಶೋಧನೆಯಿಂದ ಪರಿಹಾರಕಂಡುಕೊಳ್ಳಲು ಪ್ರಯತ್ನಿಸಬೇಕಾಗಿದೆ ಎಂದರು.
ಈ ಕಾರ್ಯಾಗಾರಕದಲ್ಲಿ ಅತಿಥಿಗಳಾಗಿ ಪ್ರೊ. ಎಸ್.ಆರ್. ಮಹದೇವ ಪ್ರಸನ್ನ ಭಾಗವಹಿಸಿ ಮಾತನಾಡಿದರು. ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಪ್ರಾರಂಭದ ಹಂತದಲ್ಲಿ ರೋಗ ಗುರುತಿಸುವಿಕೆಯಲ್ಲಿ ಪ್ರಮುಖ ಪಾತ್ರವಹಿಸುವ ದಿನಗಳು ದೂರವಿಲ್ಲವೆಂದರು.
ಡಿಮ್ಹಾನ್ಸ್ ಸಂಸ್ಥೆ ಹಾಗೂ ಐಐಐಟಿ ಧಾರವಾಡ ಸಂಸ್ಥೆಗಳೂ ಸೇರಿ ಸಂಶೋಧನಾ ಚಟುವಟಿಕೆಗಳನ್ನು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಪ್ರಾರಂಭಿಸಲಾಗಿದೆ. ಇನ್ನು ಹಲವು ಸಂಶೋಧನಾ ಕಾರ್ಯಾಚಟುವಟಿಕೆಗಳನ್ನು ಮಾಡಲು ಉದ್ದೇಶಿಸಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ವೈದ್ಯಕೀಯ, ಅರೆವೈದ್ಯಕೀಯ, ಸಮಾಜಕಾರ್ಯ ಹಾಗೂ ಇತರ ಕ್ಷೇತ್ರಗಳಿಂದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಗಳು ಭಾಗವಹಿಸಿದ್ದರು.
ದೇಶದ ವಿವಿಧ ಸಂಸ್ಥೆಗಳ ಪ್ರಾಧ್ಯಾಪಕರು ಹಾಗೂ ತಜ್ಞರು ಸಂಪನ್ಮೂಲ ವ್ಯಕ್ತಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿ, ವಿವಿಧ ವಿಷಗಳ ಮೇಲೆ ವಿಷಯ ಮಂಡನೆ ಮಾಡಿದರು.
ಕಾರ್ಯಾಗಾರದ ಸಂಘಟನಾ ಸಮಿತಿಯ ಮುಖ್ಯಸ್ಥ ಡಾ. ಶ್ರೀನಿವಾಸ ಕೊಸಗಿ, ಸಹ-ಸಂಘಟನಾ ಸಮಿತಿಯ ಮುಖ್ಯಸ್ಥ ಡಾ. ಶಿವರುದ್ರಪ್ಪ ಭೈರಪ್ಪನವರ, ಕಾರ್ಯದರ್ಶಿ ಡಾ. ಸುಶೀಲ ಕುಮಾರ ರೋಣದ, ಖಜಾಂಚಿ ಡಾ. ಮಂಜುನಾಥ ಭಜಂತ್ರಿ, ಜಂಟಿ ಕಾರ್ಯದರ್ಶಿ ಡಾ. ಮೇಘಮಾಲಾ ಟಿ, ಅಶೋಕ ಕೋರಿ, ಆರ್.ಎಮ್. ತಿಮ್ಮಾಪೂರ, ಮಲ್ಲಿಕಾ ಬಿ.ಎನ್., ಸುಷ್ಮಾ ಸಿ. ಹಾಗೂ ಇತರ ಅತಿಥಿಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.
ಡಿಮ್ಹಾನ್ಸ್ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಡಿಮ್ಹಾನ್ಸ್ ಸಂಸ್ಥೆಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಡಿಮ್ಹಾನ್ಸ್ ಸಂಸ್ಥೆಯಿಂದ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಡಿಮ್ಹಾನ್ಸ್ ಸಂಸ್ಥೆಯಲ್ಲಿ ನ್ಯೂರೋಸರ್ಜರಿ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕ ಸರಕಾರದಿಂದ ಉತ್ತಮ ಬೆಂಬಲ ದೊರಕಿದೆ ಎಂದರು.