ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಸಂಕಲ್ಪದಂತೆ ಅಂಬೇಡ್ಕರ್ ಜಯಂತಿ ಅಂಗವಾಗಿ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ಶ್ರೀರಾಮ, ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಸಂತ ಶಿಶುನಾಳ ಶರೀಫರ ಪುತ್ಥಳಿ ಹಾಗೂ ಧರ್ಮಗ್ರಂಥಗಳ ಮೆರವಣಿಗೆ ನಡೆಯಿತು.
ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ನೇತೃತ್ವದಲ್ಲಿ ಸಮಾನತೆಯ ಜಾಥಾ ಆರಂಭಕ್ಕೂ ಮುನ್ನ ಅವರ ನಿವಾಸದಲ್ಲಿ ಸಮಾನತೆ ಸಾರಿದ ಮಹನೀಯರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭದಲ್ಲಿ ಜ. ಡಾ. ತೋಂಟದ ಸಿದ್ಧರಾಮ ಶ್ರೀಗಳ ಸಮ್ಮುಖದಲ್ಲಿ ಸಮಾನತೆಯ ಹರಿಕಾರರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅನಿಲ ಮೆಣಸಿನಕಾಯಿ ಕುಟುಂಬದ ಸದಸ್ಯರು ಶ್ರೀಗಳ ಪಾದಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತೋಂಟದ ಸಿದ್ಧರಾಮ ಶ್ರೀಗಳು, ದೇಶದ ಐಕ್ಯತೆ, ಸಮಗ್ರತೆ ಕಾಯ್ದುಕೊಳ್ಳುವುದಕ್ಕೆ ಡಾ. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಒಂದು ದೀವಿಗೆಯಾಗಿದೆ.
ಬಹುತ್ವದ ಭಾರತ ಸಂವಿಧಾನವನ್ನು ಪರಿಪಾಲಿಸಬೇಕಾದ ಅವಶ್ಯಕತೆಯಿದೆ. ಆ ನಿಟ್ಟಿನಲ್ಲಿ ಅಂಬೇಡ್ಕರ್ ಜಯಂತಿ ನಿಮಿತ್ತ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರು ಅಂಬೇಡ್ಕರ್ ತತ್ವಗಳ ಪರಿಪಾಲನೆ ಮತ್ತು ಸರ್ವಧರ್ಮ ಸಮನ್ವಯತೆ ಗೌರವಿಸುವ ಕಾರಣಕ್ಕೆ ಸಮಾತನೆಯ ಸಂದೇಶ ಸಾರಿದ ಹರಿಕಾರರನ್ನು ಪೂಜಿಸಿರುವುದು ಐಕ್ಯತೆಯ ಸಂದೇಶವನ್ನು ಸಾರಿದಂತಾಗಿದೆ ಎಂದರು.
ಬಿಜೆಪಿ ಮುಖಂಡರಾದ ಕಾಂತಿಲಾಲ್ ಬನ್ಸಾಲಿ, ವಸಂತ ಪಡಗದ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ತೋಂಟದ ಸಿದ್ಧರಾಮ ಶ್ರೀಗಳ ಸಮ್ಮುಖದಲ್ಲಿ ಶ್ರೀರಾಮ, ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಸಂತ ಶಿಶುನಾಳ ಶರೀಫರ ಸಂದೇಶವನ್ನು ಸಾರುವ ಕಾರ್ಯ ನನ್ನ ಮನೆಯಿಂದಲೇ ಮೊದಲು ಆರಂಭವಾಗಲಿ ಎನ್ನುವ ಕಾರಣಕ್ಕೆ ಸಮಾನತೆಯ ಸಂದೇಶ ಸಾರಿದ ಮಹಾತ್ಮರ ಪ್ರತಿಮೆಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಸಮಾಜದಲ್ಲಿ ಶಾಂತಿ, ನೆಮ್ಮದಿ, ಭಾವೈಕ್ಯತೆ ಬೆಳೆಸಬೇಕು ಎನ್ನವ ನಿಟ್ಟಿನಲ್ಲಿ ಸಮಾನತೆಯ ಮಂದಿರ ಸ್ಥಾಪನೆಗೆ ಮುಂದಾಗಿದ್ದೇವೆ.
– ಅನಿಲ ಮೆಣಸಿನಕಾಯಿ.
ಬಿಜೆಪಿ ಮುಖಂಡರು.