ವಿಜಯಸಾಕ್ಷಿ ಸುದ್ದಿ, ಗದಗ: ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಯೋಜನೆಗಳನ್ನು ಪಡೆಯುವಲ್ಲಿ ಎದುರಾದ ಸಮಸ್ಯೆಗಳ ಪರಿಹಾರಕ್ಕೆ ಜನರು ಜನತಾ ಸದನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನಾ ಸಮಿತಿಯ ಅಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.
ನಗರದ ಎ.ಸಿ ಕಛೇರಿ ಅವರಣದಲ್ಲಿರುವ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಿದ ಕಛೇರಿಯಲ್ಲಿ ಶನಿವಾರ ನಡೆದ ಜನತಾ ಸದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದಿಂದ ಅನುಷ್ಠಾನವಾಗಿರುವ ಪಂಚ ಗ್ಯಾರಂಟಿ ಯೋಜನೆ ಪಡೆಯುವಲ್ಲಿ ಎದುರಾಗುವ ಸಮಸ್ಯೆಗಳ ಪರಿಹಾರಕ್ಕೆ ಜನತಾ ಸದನವನ್ನು ಪ್ರಾರಂಭಿಸಲಾಗಿದೆ. ನಗರದಲ್ಲಿ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿರುವವರು ಜನತಾ ಸದನದಲ್ಲಿ ಪಾಲ್ಗೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಹಾಗೂ ಉಳಿದ ತಾಲೂಕಿನವರು ವಾಟ್ಸಾಪ್ ಮೂಲಕ ತಮ್ಮ ದಾಖಲೆಗಳೊಂದಿಗೆ ಸಮಸ್ಯೆಗಳನ್ನು ಹಂಚಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಆಹಾರ ಇಲಾಖೆಯ ಅಧಿಕಾರಿಗಳು ಪಡಿತರ ಅಂಗಡಿದಾರರ ಜೊತೆಗೆ ಸಭೆ ನಡೆಸಬೇಕು. ಅನ್ನಭಾಗ್ಯದ ಅಕ್ಕಿಯು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಅಕ್ಕಿಯು ಪೋಲಾಗದಂತೆ ಜಾಗೃತೆ ವಹಿಸಬೇಕು. ಇಲಾಖೆ ಅಧಿಕಾರಿಗಳು ಗ್ಯಾರಂಟಿ ಯೋಜನೆಯ ಪ್ರಗತಿಯ ಕುರಿತು ನಿಖರ ಮಾಹಿತಿ ಒದಗಿಸಬೇಕು. ಗೃಹಲಕ್ಷ್ಮೀ ಹಾಗೂ ಯುವ ನಿಧಿ ಯೋಜನೆಯ ಕುರಿತು ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕೆಲವರು ವ್ಯಾಪಾರಕ್ಕಾಗಿ ಜಿಎಸ್ಟಿಯನ್ನು ಪ್ರಾರಂಭಿಸಿದ್ದು, ತದನಂತರ ಅದನ್ನು ನಿಷ್ಕ್ರಿಯಗೊಳಿಸಿದ್ದಾರೆ. ಟ್ಯಾಕ್ಸ್ ಫೇರ್ ಪಟ್ಟಿಯಲ್ಲಿ ಅವರ ಹೆಸರು ಬಂದಿದ್ದು, ಅವರ ಸಮಸ್ಯೆಯನ್ನು ಅವಲೋಕಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅಶೋಕ ಮಂದಾಲಿ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಅಂಗನವಾಡಿ ಮೇಲ್ವಿಚಾರಕಿಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಭೆ ಕರೆದು ಸರ್ವೆ ಕಾರ್ಯ ಚುರುಕುಗೊಳಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ನೀಲಮ್ಮ ಬೋಳ್ಳಮ್ಮನವರ, ಶಂಭು ಕಾಳೆ, ವೀರಯ್ಯ ಮಠಪತಿ, ಶರಣಪ್ಪ ಬೆಟಗೇರಿ, ಸಾವಿತ್ರಿ ಹೂಗಾರ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಿತ ಅಧಿಕಾರಿಗಳು ಹಾಜರಿದ್ದರು.
ನಗರದ ಹಳೇ ಬಸ್ ನಿಲ್ದಾಣ ಹಾಗೂ ಹೊಸ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಗೆ ಕ್ರಮ ವಹಿಸಬೇಕು. ನಗರದ ವಿವಿಧ ಪ್ರದೆಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಓಡಾಡುತ್ತಿದ್ದು, ಹೆಚ್ಚಿನ ಬಸ್ಗಳನ್ನು ಕಲ್ಪಿಸಲು ಕೆಎಸ್ಆರ್ಟಿಸಿಯವರು ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು. ಬೇಕಾಗಿರುವ ಬಸ್ಗಳ ಸಂಖ್ಯೆ ಹಾಗೂ ಸಿಬ್ಬಂದಿಗಳ ಸಂಖ್ಯೆಗಳ ಕುರಿತು ಮಾಹಿತಿ ಒದಗಿಸಬೇಕೆಂದು ಬಿ.ಬಿ. ಅಸೂಟಿ ತಿಳಿಸಿದರು.


