ವಿಜಯಸಾಕ್ಷಿ ಸುದ್ದಿ, ಗದಗ: ಉತ್ತಮ ಜೀವನ ಶೈಲಿ, ಪೌಷ್ಠಿಕ ಆಹಾರ ಸೇವನೆ, ದೈಹಿಕ ಚಟುವಟಿಕೆಗಳು ಸೇರಿದಂತೆ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೃದಯ ಆರೋಗ್ಯವನ್ನು ಕಾಪಾಡಿಕೊಂಡು ದೀರ್ಘಕಾಲ ಬದುಕಬಹುದೆಂದು ಪ್ರೊ. ಸುಧಾ ಕೌಜಗೇರಿ ಹೇಳಿದರು.
ಅವರು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಐಕ್ಯುಎಸಿ, ಯುವ ರೆಡ್ಕ್ರಾಸ್ ಘಟಕ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ, ಎನ್.ಎಸ್.ಎಸ್ ಘಟಕ ಹಾಗೂ ಆರ್.ಎಂ.ಎಸ್ ನರ್ಸಿಂಗ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಹೃದಯ ದಿನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನರ್ಸಿಂಗ್ ಕಾಲೇಜಿನ ಉಪನ್ಯಾಸಕಿ ನೇತ್ರಾ ಮಾಳಿ ಮಾತನಾಡಿ, ಹೃದಯ ಸಂಬಂಧಿತ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೆಚ್ಚಾಗಿ ಕಾಣುತ್ತಿದ್ದು, ಇದಕ್ಕೆ ಜೀವನ ಶೈಲಿ, ಆಹಾರ ಪದ್ಧತಿ, ಕೆಲಸದ ಒತ್ತಡ ಮೊದಲಾದವುಗಳು ಮುಖ್ಯ ಕಾರಣಗಳಾಗಿವೆ. ವಿದ್ಯಾರ್ಥಿಗಳು ವ್ಯಾಯಾಮ, ಯೋಗಾಸನ, ಧ್ಯಾನ ಮುಂತಾದ ಭೌತಿಕ ಮತ್ತು ಬೌದ್ಧಿಕ ಚಟುವಟಿಕೆಗಳೆಡೆಗೆ ಗಮನಹರಿಸಿ ಉತ್ತಮ ಆಹಾರ ಸೇವನೆ, ಧ್ಯಾನ, ಕನಿಷ್ಠ 6-8 ತಾಸುಗಳ ನಿದ್ದೆ ಮಾಡಬೇಕು. ರೋಗಕ್ಕೆ ಹೆದರದೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಹೇಳಿದರು.
ಯುವ ರೆಡ್ಕ್ರಾಸ್ ಘಟಕದ ಸಂಯೋಜಕಿ ಮಹಾನಂದ ಹಿರೇಮಠ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಎನ್.ಎಸ್.ಎಸ್ ಘಟಕದ ಸಂಯೋಜಕ ಪ್ರೊ. ಅಪ್ಪಣ್ಣ ಹಂಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹೃದಯದ ಆಕಾರ, ಸ್ವರೂಪ, ಕಾರ್ಯನಿರ್ವಹಣೆ, ಹೃದಯ ಸಂಬಂಧಿತ ಕಾಯಿಲೆಗಳು, ಮುಂಜಾಗ್ರತಾ ಕ್ರಮಗಳು, ಆಹಾರ ಪದ್ಧತಿ, ಜೀವನ ಶೈಲಿ, ಯೋಗಾಸನಗಳು, ಹೃದಯಾಘಾತ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಿದರು. ಬುಳ್ಳಪ್ಪ ಕಾರ್ಯಕ್ರಮ ನಿರ್ವಹಿಸಿದರು.