ವಿಜಯಸಾಕ್ಷಿ ಸುದ್ದಿ, ಗದಗ : ಮಾನವ ಜನ್ಮ ಅತ್ಯಂತ ಶ್ರೇಷ್ಠವಾದದ್ದು. ಜೀವಿತಾವಧಿಯಲ್ಲಿ ಮನುಷ್ಯನಾದವನು ಸಮಾಜಕ್ಕೆ ಏನನ್ನಾದರೂ ನೀಡಿದರೆ ಮಾತ್ರ ಜೀವನ ಸಾರ್ಥಕ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಂ.ಎ. ರಡ್ಡೇರ್ ಅಭಿಪ್ರಾಯಪಟ್ಟರು.
ಅವರು ನಿವೃತ್ತಿ ಹೊಂದಿದ ನಿಮಿತ್ತ ಸಭಾಪತಿ ಬಸವರಾಜ ಹೊರಟ್ಟಿ ದಂಪತಿಗಳು ದತ್ತು ಪಡೆದ ಸಿದ್ದಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಬದುಕನ್ನು ಸವಿಯಬೇಕೇ ವಿನಃ ಸವೆಸಬಾರದು. ಸಾಧಿಸಬೇಕೇ ಹೊರತು ರೋಧಿಸಬಾರದು. ಸಂತಸ ಪಡಬೇಕೇ ಹೊರತು ಸಂಕಟ ಪಡಬಾರದು ಅಂದಾಗಲೇ ಬದುಕು ಸಂಭ್ರಮ, ಇಲ್ಲವಾದರೆ ಸಂಗ್ರಾಮವೇ ಆಗುತ್ತದೆ.
ಸಾಧಿಸುವ ತನಕ ಕಿವುಡನಾಗು, ಸಾಧಿಸಿದ ಬಳಿಕ ಮೂಕನಾಗು ಎಂಬ ಮಾತಿನಂತೆ ಜೀವನ ಸಾಗಿದರೆ ಜನ್ಮ ಸಾರ್ಥಕವಾಗುತ್ತದೆ. ಅಂಥಹ ಸಾರ್ಥಕ ಬದುಕನ್ನು ಕಳೆಯಲು ಗದಗ ಜನತೆ ನನಗೆ ಅವಕಾಶ ನೀಡಿದ್ದಾರೆ. ಹೀಗಾಗಿ ನಾನು, ನನ್ನ ಕುಟುಂಬ ಸದಾಕಾಲ ಚಿರಋಣಿಯಾಗಿರುತ್ತೇವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮಿ ಅಣ್ಣಿಗೇರಿ ಮಾತನಾಡಿ, ಎಂ.ಎ. ರಡ್ಡೇರ್ ಅವರ ಮಾರ್ಗದರ್ಶನದ ಸಹಕಾರದಿಂದ ನಮ್ಮ ಶಾಲೆ ಜಿಲ್ಲೆಯಲ್ಲಿಯೇ ಒಂದು ಮಾದರಿ ಶಾಲೆಯಾಗಿ ಹೊರಹೊಮ್ಮಲು ಸಾಧ್ಯವಾಗಿದೆ. ಅವರ ಸೇವೆ ಮತ್ತು ಮಾರ್ಗದರ್ಶನವನ್ನು ಮುಂದೆಯೂ ನಮ್ಮಶಾಲೆ ಪಡೆಯುತ್ತದೆ. ಅವರನ್ನು ಹಾಗೂ ಅವರ ಧರ್ಮಪತ್ನಿ ಶಾಂತಾ ಅವರನ್ನು ಸನ್ಮಾನಿಸಲು ನಮ್ಮೆಲ್ಲ ಸಿಬ್ಬಂದಿಗೆ ಹೆಮ್ಮೆ ಎನಿಸುತ್ತದೆ ಎಂದರು.
ಎಂ.ಎ. ರಡ್ಡೇರ್ ದಂಪತಿಗಳಿಗೆ ಶಾಲೆಯ ಪರವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಡೈಯಟ್ ಉಪನ್ಯಾಸಕರಾದ ಎಚ್.ಬಿ. ರಡ್ಡೇರ್, ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಎಂ. ಅಗಡಿ, ಮುಖ್ಯೋಪಾಧ್ಯಾಯರಾದ ಎಮ್.ಎಚ್. ಪೂಜಾರ, ಎಸ್.ಜಿ. ಕೋಲ್ಮಿ, ಶಂಕ್ರಮ್ಮ ಆರ್. ಹಣಮಗೌಡ್ರು, ಎಂ.ಐ. ಶಿವನಗೌಡ್ರು, ಮಂಜುಳಾ ಪಿ.ಸಾಮ್ರಾಣಿ, ಶಶಿಕಲಾ ಬಿ.ಗುಳೇದವರ, ಸುಮಂಗಲ ಎಂ.ಪತ್ತಾರ್, ಶೋಭಾ ಎಸ್.ಗಾಳಿ, ರಮೇಶ್ ಬಸರಿ, ಸಾವಿತ್ರಿ ಎ.ಗದ್ದನಕೇರಿ, ಎನ್.ಆರ್. ಶಿರೋಳ್, ಸಬಿಯಾ ಯು. ಕುಷ್ಟಗಿ, ಗಂಗಾ ಎಂ.ಅಳವಂಡಿ, ಪದ್ಮಾ ವಿ.ದಾಸರ್, ಲಕ್ಷö್ಮಮ್ಮ ಮಾಳೋತ್ತರ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸಂಜೀವಿನಿ ಕೂಲಗುಡಿ ನೆರವೇರಿಸಿದರು. ಶಾರದಾ ಬಾಣದ ವಂದಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಡಾ.ಬಸವರಾಜ ಧಾರವಾಡ ಮಾತನಾಡಿ, ದಣಿವರಿಯದ, ಸದಾಕಾಲ ಶಿಕ್ಷಣದ ಗುಣಮಟ್ಟಕ್ಕಾಗಿ ಚಿಂತನೆಯ ಮೂಲಕ ಗದಗ ಶೈಕ್ಷಣಿಕ ಪರಿಸರದಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ ಎಂ.ಎ. ರಡ್ಡೇರ್ ಅವರ ಸೇವೆಯನ್ನು ಗದಗ ಶೈಕ್ಷಣಿಕ ಪರಿಸರ ಸದಾಕಾಲ ನೆನಪಿನಲ್ಲಿಟ್ಟುಕೊಳ್ಳುತ್ತದೆ. ಅವರ ಸುದೀರ್ಘ ಶೈಕ್ಷಣಿಕ ಸೇವಾವಧಿಯಲ್ಲಿ ಯಾವುದೇ ಕಳಂಕವನ್ನು ಮೈಗೆ ಅಂಟಿಸಿಕೊಳ್ಳದೇ ಕಳಂಕರಹಿತ ಸಾರ್ಥಕ ಜೀವನ ಕಳೆದಿದ್ದಾರೆ ಎಂದು ಹೇಳಿದರು.