ವಿಜಯಸಾಕ್ಷಿ ಸುದ್ದಿ, ಗದಗ : ಸಾರಿಗೆ ಸಂಸ್ಥೆಯ ಸಿಬ್ಬಂದಿಯ ಮೇಲೆ ಅತ್ಯಂತ ಗುರುತರವಾದ ಜವಾಬ್ದಾರಿಯಿದ್ದು, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಪ್ರಯಾಣಿಕರಿಗೆ ಸಾರಿಗೆ ಸೇವೆ ಒದಗಿಸಬೇಕೆಂದು ವಾಕರಸಾ ಸಂಸ್ಥೆಯ ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎಂ. ದೇವರಾಜ ಹೇಳಿದರು.
ಅವರು ಶುಕ್ರವಾರ ಗದುಗಿನ ಹೊಸ ಬಸ್ನಿಲ್ದಾಣದ ಆವರಣದಲ್ಲಿ ನಿಲ್ದಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಸ್.ಕೆ. ಅಯ್ಯನಗೌಡ್ರ ಅವರಿಗೆ ಬೀಳ್ಕೊಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರಕಾರದ ಆದೇಶದನ್ವಯ ಗದಗ ವಿಭಾಗದಲ್ಲಿ ಬಸ್ ಸಂಚಾರವನ್ನು ನಿತ್ಯ ಕಟ್ಟುನಿಟ್ಟಾಗಿ ನಿರ್ವಹಿಸುತ್ತಿದ್ದು, ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ಸಾರಿಗೆ ಸಿಬ್ಬಂದಿ ತಿಂಗಳಲ್ಲಿ 24 ದಿನಗಳವರೆಗೆ ಕಡ್ಡಾಯ ಸೇವೆ ಸಲ್ಲಿಸಬೇಕು ಎಂದರು.
ಸೇವಾ ನಿವೃತ್ತಿ ಹೊಂದುತ್ತಿರುವ ಎಸ್.ಕೆ. ಅಯ್ಯನಗೌಡ್ರ ನಿಲ್ದಾಣಾಧಿಕಾರಿಯಾಗಿ, ಕಾರ್ಮಿಕ ಮುಖಂಡರಾಗಿ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಆಡಳಿತದಲ್ಲಿ ಅನುಭವವುಳ್ಳ ಅಯ್ಯನಗೌಡ್ರ ಕಿರಿಯರಿಗೆ ಮಾರ್ಗದರ್ಶನ ಮಾಡಲಿ ಎಂದರು.
ಮುಖ್ಯ ಅತಿಥಿಗಳಾಗಿ ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಪಿ.ವೈ. ನಾಯಕ, ಬೆಂಗಳೂರಿನ ಅಖಿಲ ಕರ್ನಾಟಕ ಸಾರಿಗೆ ನೌಕರರ ಮಹಾಮಂಡಳಿಯ ಮಹಾಪ್ರಧಾನ ಕಾರ್ಯದರ್ಶಿ ಬಿ.ಜಯದೇವರಾಜೇ ಅರಸು, ಖಜಾಂಚಿ ಎನ್.ಆರ್. ದೇವರಾಜೇ ಅರಸು, ವಲಯ ಪ್ರಧಾನ ಕಾರ್ಯದರ್ಶಿ ಜಿ.ಪ್ರಕಾಶ ಮೂರ್ತಿ, ಕಾರ್ಮಿಕ ಮುಖಂಡ ರವಿಕಾಂತ ಅಂಗಡಿ ಎಸ್.ಕೆ. ಅಯ್ಯನಗೌಡ್ರ ಸೇವೆ ಬಗ್ಗೆ ಮಾತನಾಡಿದರು.
ವೇದಿಕೆಯ ಮೇಲೆ ಗಣ್ಯರಾದ ರಘು ಪುರುಷೋತ್ತಮ, ವಿವೇಕಾನಂದ ವಿಶ್ವಜ್ಞ, ಶಾಂತಣ್ಣ ಮುಳವಾಡ, ಡಿ.ಪ್ರಸಾದ, ರಾಮೇನಹಳ್ಳಿ, ಪಿ.ಎಂ. ತೆರದಾಳ, ಎಂ.ಆಂಜನೇಯ, ಗೋಪಾಲ ರಾಯರ್, ಹರೀಶ ಪೂಜಾರ, ಮಂಜುಳಾ ನಾಯಕ ಮುಂತಾದವರು ಉಪಸ್ಥಿತರಿದ್ದರು.
ರೇಣುಕಾ ಬೇಲೇರಿ ಪ್ರಾರ್ಥಿಸಿದರು, ಜಿ.ಬಿ. ಉಪ್ಪಿನ ಸ್ವಾಗತಿಸಿದರು. ಸಂತೋಷ ಕುಲಕರ್ಣಿ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಾರಿಗೆ ಸಂಸ್ಥೆಯ ಕಾರ್ಮಿಕ ಮುಖಂಡರು, ಕಾರ್ಮಿಕರು, ಅಭಿಮಾನಿಗಳು ಪಾಲ್ಗೊಂಡಿದ್ದರು.
ಎಸ್.ಕೆ. ಅಯ್ಯನಗೌಡ್ರ ದಂಪತಿಗಳನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಂಸ್ಥೆ ನನಗೆ ಅನ್ನ, ಅನುಭವ ನೀಡಿದೆ. ನಾಯಕತ್ವ ಗುಣ ಬೆಳೆಸಿದೆ. ಜೊತೆಗೆ ಜನಸಮುದಾಯದ ನಡುವೆ ಬದುಕುವ ಕಲೆಯನ್ನು ಕಲಿಸಿದೆ. ಸಂಸ್ಥೆ ಮತ್ತು ಕಾರ್ಮಿಕ ಬಂಧುಗಳ ಋಣ ನನ್ನ ಮೇಲಿದೆ. ಬರಲಿರುವ ದಿನಗಳಲ್ಲಿ ಕಾರ್ಮಿಕರ ಸೇವೆ ಮಾಡಿ ಋಣ ಮುಕ್ತನಾಗುವೆ ಎಂದರು.
Advertisement