ಬೆಂಗಳೂರು: ಯುವತಿ ವಿಚಾರಕ್ಕೆ ಆರಂಭವಾದ ಗಲಾಟೆಯಲ್ಲಿ ಆಟೋ ಚಾಲಕನಿಗೆ ಚಾಕು ಇರಿದಿರುವ ಘಟನೆ ಫೆಬ್ರವರಿ 1ರಂದು ಕೆ.ಆರ್ ಪುರಂ ವ್ಯಾಪ್ತಿಯ ದೇವಸಂದ್ರ ಪ್ರದೇಶದಲ್ಲಿ ನಡೆದಿದೆ. ಆಟೋ ಚಾಲಕ ರೋಷನ್ ಎಂಬಾತನ ಕುತ್ತಿಗೆಗೆ ಚಾಕುವಿನಿಂದ ಇರಿಯಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ರೋಷನ್ನನ್ನು ಕೆ.ಆರ್ ಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆತನಿಗೆ ಚಿಕಿತ್ಸೆ ಮುಂದುವರೆದಿದೆ.
ಆರೋಪಿ ಮಾಮು ಹಾಗೂ ಹಲ್ಲೆಗೊಳಗಾದ ರೋಷನ್ ಇಬ್ಬರೂ ನೇಪಾಳ ಮೂಲದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಇದೇ ವಿಚಾರಕ್ಕೆ ಇಬ್ಬರ ನಡುವೆ ಹಿಂದಿನಿಂದಲೂ ವೈಮನಸ್ಸು ಇತ್ತು. ಈ ಹಿನ್ನೆಲೆಯಲ್ಲಿ ಫೆಬ್ರವರಿ 1ರಂದು ರಾತ್ರಿ ದೇವಸಂದ್ರದಲ್ಲಿ ಮಾತನಾಡಲು ಇಬ್ಬರೂ ಭೇಟಿಯಾಗಿದ್ದರು. ಈ ವೇಳೆ ಕೆಲ ಕ್ಷಣಗಳ ಬಳಿಕ ಮಾಮುನ ಸ್ನೇಹಿತರಾದ ವಾಸಿಂ, ಯಾಸೀಫ್ ಮತ್ತು ಖಲೀಂ ಸ್ಥಳಕ್ಕೆ ಬಂದಿದ್ದು, ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ.
ನೋಡನೋಡುತ್ತಿದ್ದಂತೆ ಮಾಮು ಗ್ಯಾಂಗ್ ಚಾಕುವಿನಿಂದ ರೋಷನ್ ಕುತ್ತಿಗೆಗೆ ಇರಿದಿದ್ದಾನೆ. ಘಟನೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೆ.ಆರ್ ಪುರಂ ಠಾಣೆಯಲ್ಲಿ ಹತ್ಯೆ ಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.



