ಬೆಂಗಳೂರು: ನಗರದಲ್ಲಿ ಸಾರ್ವಜನಿಕ ಸಾರಿಗೆ ಭದ್ರತೆ ಕುರಿತು ಆತಂಕ ಹೆಚ್ಚುತ್ತಿರುವ ಹಿನ್ನೆಲೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಎಲೆಕ್ಟ್ರಿಕ್ ಬಸ್ಗಳ ನಿರ್ವಹಣೆ ವಿಚಾರದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಮತ್ತೊಮ್ಮೆ ಪತ್ರ ಬರೆದಿದ್ದಾರೆ.
ನಗರದ ಸಂಚಾರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಸಂಸ್ಥೆಯ ಬಳಿ 6 ಸಾವಿರಕ್ಕೂ ಹೆಚ್ಚು ಬಸ್ಗಳಿದ್ದು, ಸುಮಾರು 1,700 ಎಲೆಕ್ಟ್ರಿಕ್ ಬಸ್ಗಳಾಗಿವೆ. ಆದರೆ ಇತ್ತೀಚೆಗೆ ಈ ಬಸ್ಗಳಿಂದ ಅಪಘಾತಗಳು ಹಾಗೂ ಬ್ರೇಕ್ ವೈಫಲ್ಯ ಪ್ರಕರಣಗಳು ಹೆಚ್ಚುತ್ತಿರುವುದಾಗಿ ಸರ್ಕಾರ ಆತಂಕ ವ್ಯಕ್ತಪಡಿಸಿದೆ.
ಗುತ್ತಿಗೆ ಮಾದರಿಯಲ್ಲಿ ಖಾಸಗಿ ಸಂಸ್ಥೆಗಳ ಮೂಲಕ ಬಸ್ಗಳನ್ನು ಓಡಿಸಲಾಗುತ್ತಿದ್ದು, ಚಾಲಕರ ನೇಮಕವೂ ಕಂಪನಿಯದ್ದೇ ಆಗಿರುವುದರಿಂದ ಅಪಘಾತಗಳಿಗೆ ಹೊಣೆಗಾರಿಕೆ ನಿಗದಿ ಮಾಡುವುದು ಕಷ್ಟವಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಬ್ಯಾಟರಿ ಸಮಸ್ಯೆಯಿಂದ ಬಸ್ಗಳು ಮಧ್ಯದಲ್ಲೇ ನಿಲ್ಲುತ್ತಿರುವುದು ಕಾರ್ಯಾಚರಣೆಗೆ ಅಡಚಣೆ ತಂದಿದೆ.
ಒಂದು ದಿನಕ್ಕೆ 200 ಕಿಲೋಮೀಟರ್ ಓಡಬೇಕಾದ ಬಸ್ಗಳು 100 ರಿಂದ 120 ಕಿಲೋಮೀಟರ್ ಮಾತ್ರ ಸಂಚರಿಸುತ್ತಿವೆ. 45 ದಿನಗಳಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರೂ ಕ್ರಮವಾಗದ ಹಿನ್ನೆಲೆ ಎರಡನೇ ಬಾರಿ ಪತ್ರ ಬರೆದಿರುವುದಾಗಿ ಸಚಿವರು ತಿಳಿಸಿದ್ದಾರೆ.



