ತೆವಳುತ್ತ ಸಾಗಿರುವ ರಸ್ತೆ ಕಾಮಗಾರಿ: ರಸ್ತೆ ಧೂಳಿಗೆ ಹೈರಾಣಾದ ಜನತೆ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಕೋಡಿಕೊಪ್ಪ ಸಂಪರ್ಕಿಸುವ ದ್ವಿಪಥ ರಸ್ತೆ ಕಾಮಗಾರಿ ಕುಂಟುತ್ತ ಸಾಗಿದ್ದು, ಕಾಮಗಾರಿಯಿಂದಾಗಿ ರಸ್ತೆಯ ಅಕ್ಕಪಕ್ಕದ ಮನೆಗಳು ಧೂಳಿನಿಂದ ಆವೃತ್ತವಾಗುತ್ತಿವೆ. ರಸ್ತೆಯಲ್ಲಿ ನಡೆದಾಡುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು, ವಾಹನ ಸವಾರರು ಧೂಳನ್ನೇ ಉಸಿರಾಡುವಂತಾಗಿದೆ. ಕಾಮಗಾರಿ ಗುತ್ತಿಗೆ ಪಡೆದುಕೊಂಡವರು ಸಮಸ್ಯೆ ಪರಿಹಾರಕ್ಕಾಗಿ ರಸ್ತೆಗೆ ನೀರು ಚಿಮುಕಿಸುವ ಕಾರ್ಯಕ್ಕೆ ಮುಂದಾಗಬೇಕಿತ್ತು. ಆದರೆ, ರಸ್ತೆಯನ್ನು ಅಗೆದು ಕೈಬಿಟ್ಟು ಕುಳಿತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

Advertisement

ರಸ್ತೆಯಲ್ಲಿ ಸಂಗ್ರಹಗೊಳ್ಳುತ್ತಿರುವ ಮಣ್ಣಿನಿಂದಾಗಿ ರಸ್ತೆಗಳಲ್ಲಿ ವಾಹನ ವೇಗವಾಗಿ ಸಂಚರಿಸುತ್ತಿದ್ದಂತೆಯೇ ಧೂಳು ಮೇಲೇಳುತ್ತಿದೆ. ಇದರಿಂದಾಗಿ ವಾಹನ ಸವಾರರಷ್ಟೇ ಅಲ್ಲದೆ ರಸ್ತೆಯ ಇಕ್ಕೆಲಗಳ ವರ್ತಕರು, ನಿವಾಸಿಗಳು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಮಾರ್ಚ್ ಮೊದಲ ವಾರದಲ್ಲಿ ನರೇಗಲ್ಲ ಬಸ್ ನಿಲ್ದಾಣದಿಂದ ಕೋಡಿಕೊಪ್ಪ ಗ್ರಾಮದ ಶ್ರೀ ಅನ್ನದಾನೇಶ್ವರ ಕಾಲೋನಿವರೆಗಿನ ದ್ವಿಪಥ ರಸ್ತೆ ಕಾಮಗಾರಿಗೆ ಶಾಸಕ ಜಿ.ಎಸ್. ಪಾಟೀಲ ಚಾಲನೆ ನೀಡಿದ್ದರು. ಕಾಮಗಾರಿ ಪಡೆದ ಗುತ್ತಿಗೆದಾರರು ಮೂರು ತಿಂಗಳಾದರೂ ರಸ್ತೆಯ ಒಂದು ಬದಿಯನ್ನು ಕಿತ್ತು ಎಂ ಸ್ಯಾಂಡ್ ಮತ್ತು ಕಡಿಯನ್ನು ಹಾಕಿದ್ದಾರೆ. ಇದರಿಂದ, ಆ ರಸ್ತೆಯ ಮೂಲಕ ಭಾರೀ ವಾಹನಗಳು ಹಾಯ್ದು ಹೋಗುತ್ತಿದ್ದಂತೆ, ರಸ್ತೆಯಲ್ಲಿನ ಎಂ ಸ್ಯಾಂಡ್ ರಸ್ತೆಯನ್ನು ಧೂಳುಮಯ ಮಾಡುತ್ತಿದೆ. ಇದೇ ರಸ್ತೆಯ ಮೂಲಕ ಪ್ರತಿನಿತ್ಯ ಸರಕಾರಿ ಮತ್ತು ಖಾಸಗಿ ಶಾಲೆಯ ಸಾವಿರಾರು ವಿದ್ಯಾರ್ಥಿಗಳು ಸಾಗುತ್ತಿದ್ದು, ಕಣ್ಣು-ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಒಂದು ಬದಿಯ ರಸೆಯನ್ನು ಅಗೆದು ಎಂ ಸ್ಯಾಂಡ್ ಹಾಕಿದ ಪರಿಣಾಮ ಇನ್ನೊಂದು ಬದಿಯಲ್ಲಿ ವಾಹನಗಳು ಎದುರು ಬದುರು ಬರುತ್ತಿದ್ದು, ಸಂಚಾರ ಅಸ್ತವ್ಯಸ್ತವಾಗುತ್ತಿದೆ.

ರಸ್ತೆ ಧೂಳಿನಿಂದಾಗಿ ಅನೇಕರು ಕೆಮ್ಮು, ಉಸಿರಾಟದ ಸಮಸ್ಯೆಗೂ ಸಿಲುಕಿದ್ದಾರೆ. ಕಳೆದೊಂದು ವಾರದಿಂದ ಮನೆಯ ಬಾಗಿಲು, ಕಿಟಿಕಿ ತೆಗೆಯದ ಸ್ಥಿತಿ ನಿರ್ಮಾಣವಾಗಿದೆ. ಮನೆಯ ಹೊರಗಡೆ ಬಟ್ಟೆಗಳನ್ನು ಹಾಕಿದರೆ ಕ್ಷಣ ಮಾತ್ರದಲ್ಲಿ ಧೂಳುಮಯವಾಗುತ್ತಿದೆ. ರಸ್ತೆ ಕಾಮಗಾರಿ ಮುಗಿಯುವವರೆಗೂ ರಸ್ತೆಗೆ ನೀರು ಚಿಮುಕಿಸಬೇಕು

– ನಿಜಲಿಂಗಪ್ಪ ನಾಶಿಪುಡಿ.

ಕೋಡಿಕೊಪ್ಪ ನಿವಾಸಿ.


Spread the love

LEAVE A REPLY

Please enter your comment!
Please enter your name here