ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿರಹಟ್ಟಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬಹುತೇಕ ರಸ್ತೆಗಳು ಹಾಳಾಗಲು ಕಲ್ಲು, ಮರಳು, ಎಂಸ್ಯಾಂಡ್ಗಳನ್ನು ಮಿತಿಮೀರಿ ತುಂಬಿಕೊಂಡು ಓಡಾಡುವ ಲಾರಿ, ಟಿಪ್ಪರ್ಗಳೇ ಕಾರಣ. ಓವರ್ಲೋಡ್ ತುಂಬಿಕೊಂಡು ಸಾಗುತ್ತಿರುವ ವಾಹನಗಳನ್ನು ಗಮನಿಸದೆ ಇರುವ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇವರೊಂದಿಗೆ ಶಾಮೀಲಾಗಿದ್ದಾರೆ ಎನ್ನುವ ಸಂಶಯ ಬರುವಂತಾಗಿದೆ ಎಂದು ಶಾಸಕ ಡಾ.ಚಂದ್ರು ಲಮಾಣಿ ಆರೋಪಿಸಿದರು.
ಅವರು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿ, ನಿತ್ಯ ನೂರಾರು ವಾಹನಗಳು ಕ್ರಷರ್ ಮೂಲಕ ಪ್ರಮುಖ ರಸ್ತೆಗಳಲ್ಲಿ ಓವರ್ ಲೋಡ್ ತುಂಬಿಕೊಂಡು ಹೋಗುತ್ತಿರುವದು ಅಧಿಕಾರಿಗಳಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದ ಅವರು, 14-15 ಟನ್ ತುಂಬಿರುವುದಾಗಿ ಹೇಳುವ ಚಾಲಕರು ಕನಿಷ್ಠ 20-25 ಟನ್ ತುಂಬಿರುತ್ತಾರೆ ಎಂದು ಆರೋಪಿಸಿದರು.
ಹೀಗೆ ಸರಕಾರಕ್ಕೂ ಮೋಸ ಮಾಡುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ರಾಜಸ್ವ ನಷ್ಟವಾಗುತ್ತಿದೆ. ಜೊತೆಗೆ ಸಂಪೂರ್ಣ ರಸ್ತೆಗಳನ್ನು ಹಾಳು ಮಾಡುತ್ತಿದ್ದಾರೆ. ಇದನ್ನು ಕೂಡಲೇ ನಿಲ್ಲಿಸಬೇಕು. ಕ್ರಷರ್ ಮಾಲೀಕರು, ಲಾರಿ, ಟಿಪ್ಪರ್ಗಳ ಮಾಲೀಕರು ಸ್ವಯಂಪ್ರೇರಿತರಾಗಿ ಓವರ್ ಲೋಡ್ ಹಾಕುವದನ್ನು ನಿಲ್ಲಿಸಲಿ. ಇಲ್ಲದಿದ್ದಲ್ಲಿ ತಹಸೀಲ್ದಾರ ಹಾಗೂ ಗದಗ ಉಪವಿಭಾಗಾಧಿಕಾರಿಗಳೊಂದಿಗೆ ಮಾತನಾಡಿ ತಾಲೂಕಿನಾದ್ಯಂತ ಆರ್ಟಿಓ, ಪೋಲೀಸ್, ಕಂದಾಯ ಇಲಾಖೆಗಳಿಂದ ಅಲ್ಲಲ್ಲಿ ಚೆಕ್ಪೋಸ್ಟ್ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.