ಹದಗೆಟ್ಟ ರಸ್ತೆ: ವಾಹನ ತಡೆದು ಆಕ್ರೋಶ

0
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪಟ್ಟಣದ ಬಸಾಪೂರ ಕ್ರಾಸ್‌ನಿಂದ ಸೊರಟೂರ ಸಂಪರ್ಕಿಸುವ ಗ್ರಾಮೀಣ ಸಂಪರ್ಕ ರಸ್ತೆಯಲ್ಲಿ ಸೆರೆಂಟಿಕಾ ವಿಂಡ್ ಪಾವರ್ ಕಂಪನಿಯ ಟಿಪ್ಪರ್ ಸೇರಿದಂತೆ ಭಾರೀ ಗಾತ್ರದ ವಾಹನಗಳು ಓವರ್ ಲೋಡ್ ತುಂಬಿಕೊಂಡು ಸಂಚರಿಸುವುದರಿಂದ ರಸ್ತೆ ಡಾಂಬರ್ ಕಿತ್ತು ಹದಗೆಟ್ಟು ಹೋಗಿದ್ದು, ರೈತರು ಟಿಪ್ಪರ್ ಸೇರಿದಂತೆ ಸೆರೆಂಟಿಕಾ ವಿಂಡ್ ಪಾವರ್ ಕಂಪನಿಯ ಕಾಂಕ್ರೀಟ್ ಮಿಕ್ಸರ್ ವಾಹನಗಳನ್ನು ತಡೆದು ಚಾಲಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆದಿದೆ.

Advertisement

ಈ ಮಾರ್ಗದ ಅಕ್ಕ-ಪಕ್ಕದ ಜಮೀನುಗಳಲ್ಲಿ ಪವನ ವಿದ್ಯುತ್ ಫ್ಯಾನ್ ಅಳವಡಿಸಲು ಪವನ ವಿದ್ಯುತ್ ಕಂಪನಿಯ ಭಾರೀ ಗಾತ್ರದ ವಾಹನಗಳು ಹಗಲು ರಾತ್ರಿಯೆನ್ನದೇ ಸಂಚರಿಸಿದ್ದರಿಂದ ರಸ್ತೆಗೆ ಹಾಕಿದ ಡಾಂಬರ್ ಕಿತ್ತು ಹೋಗಿ, ತಗ್ಗು-ಗುಂಡಿಗಳು ಬಿದ್ದು ರಸ್ತೆಯೂದ್ದಕ್ಕೂ ರಸ್ತೆಗೆ ಹಾಕಿದ್ದ ಸಣ್ಣ ಗಾತ್ರದ ಜಲ್ಲಿಕಲ್ಲುಗಳು (ಖಡಿ) ಹರಡಿಕೊಂಡಿವೆ. ಎತ್ತು, ದನಕರುಗಳು ಈ ಮಾರ್ಗದಲ್ಲಿ ನಡೆದುಕೊಂಡು ಹೋಗಲಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಮಾತಿಗೆ ಕಿವಿಗೊಡದ ಪವನ ವಿದ್ಯುತ್ ಕಂಪನಿಯ ವಾಹನಗಳು ಹಗಲು-ರಾತ್ರಿ ಎನ್ನದೇ ಸಂಚರಿಸುವುದನ್ನು ಕಂಡ ರೈತರು ವಾಹನಗಳನ್ನು ತಡೆದು ಕೆಲ ಕಾಲ ಪ್ರತಿಭಟಿಸಿ, ಈ ಮಾರ್ಗದಲ್ಲಿ ಭಾರೀ ಗಾತ್ರದ ವಾಹನಗಳು ಸಂಚರಿಸಲು ನಾವು ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು. ಕಿತ್ತು ಹೋದ ರಸ್ತೆ ರಿಪೇರಿ ಮಾಡಿಕೊಡಬೇಕು, ಇಲ್ಲವಾದಲ್ಲಿ ನಿಮ್ಮ ವಿರುದ್ಧ ಹೋರಾಟಕ್ಕಿಳಿಯುತ್ತೇವೆ ಎಂದು ಎಚ್ಚರಿಸಿದರು.

ಈ ವೇಳೆ ರೈತರಾದ ಬಸವರಾಜ ಕರಿಗಾರ, ದೇವಪ್ಪ ಅಣ್ಣಿಗೇರಿ, ಮಹಮದ್ ಅಲಿ ಶೇಖ್, ಮಹಾಂತೇಶ ವೆಂಕಟಾಪೂರ, ಶೇಖಪ್ಪ ಸಂಗನಪೇಟಿ, ಮರಿಯಪ್ಪ ಕಪ್ಪತನವರ, ಮಹಾಂತೇಶ ಹೊಸಕಟ್ಟಿ, ಕಿರಣ ಕುಲಕರ್ಣಿ, ಮಂಜುನಾಥ ಬಾರಕೇರ, ಮುತ್ತಣ್ಣ ಲಾಳಿ, ದೇವರಾಜ ಸಂಗನಪೇಟಿ, ಗಂಗಪ್ಪ ಹೊರಪೇಟಿ, ಉಮ್ಮಣ್ಣ ಕರಿಗೂಳಪ್ಪನವರ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here