ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಅವಳಿ ನಗರದ 12 ವಲಯಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ರಸ್ತೆಗಳಲ್ಲಿನ ತಗ್ಗು ಗುಂಡಿಗಳನ್ನು ವೈಟ್ಮಿಕ್ಸ್ ಬಳಿಸಿ ತುಂಬುವ ಕಾರ್ಯ ಆರಂಭವಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತ ಡಾ. ರುದ್ರೇಶ ಘಾಳಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನಿರಂತರ ಮಳೆಯಿಂದಾಗಿ ಅವಳಿ ನಗರದ ಅನೇಕ ರಸ್ತೆಗಳು ಹಾಳಾಗಿವೆ. ಮುಖ್ಯವಾಗಿ ಗೌರಿ ಗಣೇಶ ಹಬ್ಬ ಬರುತ್ತಿರುವದರಿಂದ ಗಣೇಶ ಮೂರ್ತಿ ಮೆರವಣಿಗೆಯ ಮಾರ್ಗಗಳ ಪಾಟ್ಹೋಲ್ ತುಂಬುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಕುರಿತು ಜಿಲ್ಲಾಧಿಕಾರಿಗಳು ಸಹ ನಿರ್ದೇಶನ ನೀಡಿದ್ದು, ಅವಳಿ ನಗರದ 12 ವಲಯ ಕಚೇರಿಯ ವ್ಯಾಪ್ತಿಯಲ್ಲಿ ಬರುವ ಸುಮಾರು 50ಕ್ಕೂ ಹೆಚ್ಚು ಮಾರ್ಗಗಳ ಸುಮಾರ 25 ಕಿ.ಮೀ. ವ್ಯಾಪ್ತಿಯ ರಸ್ತೆಯನ್ನು ತಗ್ಗು ಗುಂಡಿ ಮುಕ್ತಗೊಳಿಸಲು ಏಕಕಾಲಕ್ಕೆ ಅವಳಿನಗರದಲ್ಲಿ ಕೆಲಸ ಆರಂಭಿಸಲಾಗಿದೆ. ಮುಂದಿನ 3-4 ದಿನಗಳಲ್ಲಿ ರಸ್ತೆಗಳನ್ನು ಸಂಚಾರಯೋಗ್ಯಗೊಳಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.