ವಿಜಯಸಾಕ್ಷಿ ಸುದ್ದಿ, ಗದಗ: ನೆಹರು ಯುವ ಕೇಂದ್ರ ಗದಗ, ಗದಗ ಜಿಲ್ಲಾ ಪೊಲೀಸ್, ಗದಗ ಸಂಚಾರ ಪೊಲೀಸ್ ಠಾಣೆ, ಶ್ರೀ ಡಿಜಿಎಮ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಗದಗ, ರಾಷ್ಟ್ರೀಯ ಸ್ವಯಂ ಸೇವಾ ಘಟಕ ಇವರ ಸಯುಂಕ್ತ ಆಶ್ರಯದಲ್ಲಿ `ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ-2025′ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಡಿಜಿಎಮ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಎನ್. ಬೆಳವಡಿ ಉದ್ಘಾಟಿಸಿ, ನಗರದ ಮುಳಗುಂದ ನಾಕಾದವರೆಗೆ ಬಂದು ಶಿಬಿರಾರ್ಥಿಗಳಿಗೆ ಪ್ರಾಯೋಗಿಕವಾಗಿ ರಸ್ತೆ ಸುರಕ್ಷತೆಯ ಕುರಿತು ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರಲ್ಲದೆ, ಸ್ವತಃ ಶಿಬಿರಾರ್ಥಿಗಳಿಂದ ಸಂಚಾರ ಪೊಲೀಸ್ರೊಂದಿಗೆ ಸ್ವಯಂ ಸೇವಕರಾಗಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆ ಮಾಡುವಲ್ಲಿ ಸಹಕರಿಸಿದರು.
ನಂತರ ನಗರದ ಭೂಮರಡ್ಡಿ ವೃತ್ತದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಗೃತಿ ಅಂಗವಾಗಿ ಸಂಚಾರ ನಿಯಮಗಳನ್ನು ಪಾಲಿಸಿದವರಿಗೆ ಹೂಗುಚ್ಛ ನೀಡಿ ಸತ್ಕರಿಸಿ, ಸಂಚಾರ ನಿಯಮಗಳನ್ನು ಪಾಲಿಸುವಂತೆ ಭಿತ್ತಿ ಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು. ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗದಗ ಉಪವಿಭಾಗದ ಡಿ.ಎಸ್.ಪಿ ಜೆ.ಎಚ್. ಇನಾಮದಾರ್ ಆಗಮಿಸಿ ಸಂಚಾರ ನಿಯಮದ ಬಗ್ಗೆ ಮಾತನಾಡಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಡಿಜಿಎಮ್ ಆಯುರ್ವೇದ ಮಹಾವಿದ್ಯಾಲಯದ ಸುಮಾರು 50 ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು, ಗದಗ ಗ್ರಾಮೀಣ ಠಾಣೆಯ ಪಿಐ ಸಿದ್ದಾರಮೇಶ್ವರ ಗುಡೇದ, ಬೆಟಗೇರಿ ಠಾಣೆಯ ಪಿ.ಎಸ್.ಐ ಎಲ್.ಎಮ್. ಆರಿ, ಸಂಚಾರ ಪೊಲೀಸ್ ಠಾಣೆಯ ಎ.ಎಸ್.ಐ ಎಸ್.ಎಮ್. ತೆಗ್ಗಿ, ಸಂಚಾರ ಠಾಣೆಯ ಸಿಬ್ಬಂದಿಗಳಾದ ಎನ್.ಎಚ್. ಗುಡ್ಡದ, ಬಿ.ಐ. ಕಮ್ಮಾರ, ಸಂತೋಷ ಹರಿಜನ, ಸಂಗೀತಾ ಕಿಂದ್ರಿ ಭಾಗವಹಿಸಿದ್ದರು. ಕೊನೆಗೆ ನೆಹರು ಯುವ ಕೇಂದ್ರದ ಅಧಿಕಾರಿಗಳಾದ ಎನ್.ರಂಜನಿ ವಂದಿಸಿದರು.