ಕುಂಟುತ್ತ ಸಾಗಿದ ರಸ್ತೆ ಕಾಮಗಾರಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಮುಖ್ಯ ಬಜಾರ್ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ. ಪಟ್ಟಣದ ಹೆದ್ದಾರಿಯೇ ಆಗಿರುವ ಈ ರಸ್ತೆ ಸಂಪರ್ಕ ಕಳೆದ ಒಂದೂವರೆ ತಿಂಗಳಿಂದ ಸಂಪೂರ್ಣ ಕಡಿತಗೊಂಡಿದ್ದು, ರೈತರು, ವ್ಯಾಪಾರಸ್ಥರು, ಜನಸಾಮಾನ್ಯರು, ಶಾಲಾ ಮಕ್ಕಳು, ರೋಗಿಗಳು, ವೃದ್ಧರು, ಅಟೋ ಚಾಲಕರ ಪರಿಸ್ಥಿತಿ ಹೇಳತೀರದಾಗಿದೆ.

Advertisement

ದೂದಪೀರಾಂ ದರ್ಗಾ, ಕೋರ್ಟ್, ತಹಸೀಲ್ದಾರ ಕಚೇರಿ, ಶಾಲೆ ಸೇರಿ ನಿತ್ಯ ಕಾರ್ಯಕ್ಕೆ ಹೋಗಲು ರಸ್ತೆ ಇಲ್ಲದಂತಾಗಿದೆ. ಚಿಕ್ಕದಾದ ಒಳರಸ್ತೆ ಬಳಸಿ ಬೈಕ್, ಅಟೋಗಳು ಮಾತ್ರ ಹೋಗುತ್ತವೆಯಾದ್ದರಿಂದ ಸಾಕಷ್ಟು ಸಮಸ್ಯೆ ತಲೆದೋರಿದೆ. ದರ್ಗಾ, ಕೋರ್ಟ್, ತಹಸೀಲ್ದಾರ ಕಚೇರಿಗೆ ಮುಖ್ಯ ರಸ್ತೆ ಮಾರ್ಗದಲ್ಲಿ ಬರುವ ವಾಹನಗಳಿಗೆ ವಾಪಸ್ ಹೋಗಲು ಅವಕಾಶವಿಲ್ಲ. ಮಳೆಯಾದರಂತೂ ನರಕಯಾತನೆ ಅನುಭವಿಸುತ್ತಾ ಹಿಡಿಶಾಪ ಹಾಕುವಂತಾಗಿದೆ.

ಪುರಸಭೆಯ 15ನೇ ಹಣಕಾಸಿನ 76 ಲಕ್ಷ ರೂ ಅನುದಾನದಲ್ಲಿ ಮುಖ್ಯ ಬಜಾರ್ ರಸ್ತೆಯ ಗ್ರಾಮ ಚಾವಡಿಯಿಂದ ಭರಮದೇವರ ಸರ್ಕಲ್‌ವರೆಗಿನ 260 ಮೀಟರ್ ರಸ್ತೆ ಅಭಿವೃದ್ಧಿ (ಸಿಸಿ) ಕಾಮಗಾರಿಗೆ ಶಾಸಕ ಡಾ. ಚಂದ್ರು ಲಮಾಣಿ ಎಪ್ರಿಲ್‌ನಲ್ಲಿ ಭೂಮಿಪೂಜೆ ನೆರವೇರಿಸಿದ್ದರು. ಅರ್ಧಂಬರ್ಧ ರಸ್ತೆ ಅಗೆದು ಕೈ ಬಿಟ್ಟಿದ್ದ ಸಂದರ್ಭದಲ್ಲಿ ಸಾರ್ವಜನಿಕರ ಒತ್ತಾಯದಿಂದ ಅಗೆದ ರಸ್ತೆಗೆ ಮಣ್ಣು ಹಾಕಲು ಪ್ರಾರಂಭಿಸಿದ್ದರು. ಒಂದು ತಿಂಗಳಲ್ಲಿ ಮಾಡಿ ಮುಗಿಸಬಹುದಾದ ರಸ್ತೆ ಕಾಮಗಾರಿ ಒಂದೂವರೆ ತಿಂಗಳಿಂದ ಕುಂಟ್ಟುಂತ್ತಾ ಸಾಗಿದೆ. ಪಟ್ಟಣದಲ್ಲಿ ಈ ರೀತಿ ಅನೇಕ ಕಾಮಗಾರಿಗಳು ವರ್ಷಗಳಿಂದ ಅರ್ಧಕ್ಕೆ ನಿಂತರೂ ಯಾರೂ ಕೇಳುವವರೇ ಇಲ್ಲದಂತಾಗಿರುವುದು ದುರ್ದೈವ. ರಸ್ತೆಗೆ ಹಾಕಿರುವ ಮಣ್ಣು ಕೂಡ ಸಂಪೂರ್ಣ ಕಳಪೆಯಾಗಿದ್ದು, ಉತ್ತಮ ಗುಣಮಟ್ಟದ ಕೆಂಪು ಗೊರಸು ಹಾಕುವಂತೆ ಸಾರ್ವಜನಿಕರು ತಡೆದ ಕಾರಣದಿಂದ ಗುತ್ತಿಗೆದಾರ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.

ರಸ್ತೆ ಕಾಮಗಾರಿ ಪ್ರಾರಂಭವಾಗಿ ಒಂದೂವರೆ ತಿಂಗಳು ಕಳೆದರೂ ಪ್ರಗತಿ ಕಾಣದಿರುವುದಕ್ಕೆ ಅಧಿಕಾರಿಗಳ, ಜನಪ್ರತಿನಿಧಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷವೇ ಕಾರಣವಾಗಿದೆ. ರೈತರು, ಸಾರ್ವಜನಿಕರು, ಶಾಲಾ ಮಕ್ಕಳು, ಅಟೋ ಚಾಲಕರು, ವ್ಯಾಪಾರಸ್ಥರು ಪಡಬಾರದ ಯಾತನೆ ಅನಭವಿಸುತ್ತಿದ್ದಾರೆ. ಪುರಸಭೆಯವರು ಕಳಪೆ ಕಾಮಗಾರಿಗೆ ಅವಕಾಶ ಕೊಡದೇ ತ್ವರಿತಗತಿಯಲ್ಲಿ ಗುಣಮಟ್ಟದ ಕಾಮಗಾರಿ ಮಾಡಿಸಬೇಕು. ನಿಧಾನಗಗತಿ ಮತ್ತು ಕಳಪೆ ಕಾಮಗಾರಿ ವಿರುದ್ಧ ಪುರಸಭೆಯ ಮುಂದೆ ಸಾರ್ವಜನಿಕರೊಡಗೂಡಿ ಪ್ರತಿಭಟನೆ ಮಾಡಲಾಗುವುದು

– ಮಂಜುನಾಥ ಮಾಗಡಿ, ರಾಜು ಅರಳಿ.

ಸ್ಥಳೀಯ ನಾಗರಿಕರು.

ಕಾಮಗಾರಿಗೆ ಬಳಸುವ ಮಣ್ಣು ಕಳಪೆಯಾಗಿದೆ ಎಂದು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರಿಂದ ಬಳಸಿದ ಮಣ್ಣಿನ ಗುಣಮಟ್ಟದ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸುವಂತೆ ಮತ್ತು ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು.

– ಮಹೇಶ ಹಡಪದ.

ಮುಖ್ಯಾಧಿಕಾರಿ.


Spread the love

LEAVE A REPLY

Please enter your comment!
Please enter your name here