ಕೆವಿಜಿ ಬ್ಯಾಂಕ್ನ ಪಿಗ್ಮಿ ಕಲೆಕ್ಟರ್ ಲಿಂಗನಗೌಡರ, ಮತ್ತೊಬ್ಬ ಭಕ್ತ ಸಾವು
ಗದಗ: ರಥೋತ್ಸವದ ವೇಳೆ ಚಕ್ರದಡಿ ಸಿಲುಕಿ ಇಬ್ಬರು ಭಕ್ತರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ದುರ್ಘಟನೆ ಶನಿವಾರ ಸಂಜೆ ಜರುಗಿದೆ.
ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಇಂದು ನಡೆದ ವೀರಭದ್ರೇಶ್ವರ ಜಾತ್ರೆಯ ರಥೋತ್ಸವದ ವೇಳೆ ಈ ಘಟನೆ ನಡೆದಿದೆ.
ಮೃತರನ್ನು ರೋಣದ ಕೆವಿಜಿ ಬ್ಯಾಂಕ್ನ ಪಿಗ್ಮಿ ಕಲೆಕ್ಟರ್ ಆಗಿದ್ದ ಮಲ್ಲನಗೌಡ ಲಿಂಗನಗೌಡರ (52) ಹಾಗೂ ಗೊಡಚಪ್ಪ ಬಾರಕೇರ (32) ಎಂದು ಗುರುತಿಸಲಾಗಿದೆ. ಭಾನುವಾರ ಮುಂಜಾನೆಯವರೆಗೂ ಮೃತನ ವಿಳಾಸಕ್ಕಾಗಿ ಪೊಲೀಸರು ಹರಸಾಹಸ ಪಟ್ಟಿದ್ದರು. ಭಾನುವಾರ ಮುಂಜಾನೆ ರೋಣ ತಾಲೂಕಿನ ಬಾಸಲಾಪೂರ ಗ್ರಾಮದ ಗೊಡಚಪ್ಪನ ಕುಟುಂಬಸ್ಥರು ನಿನ್ನೆ ಸಂಜೆಯಿಂದ ರಾತ್ರಿಯವರೆಗೂ ಮನೆಗೆ ಬಾರದ ಮಗನನ್ನು ಹುಡುಕಾಟ ನಡೆಸಿದ್ದರು. ಮುಂಜಾನೆ ರೋಣ ಪೊಲೀಸರ ಬಳಿ ವಿಚಾರಿಸಿದಾಗ ಮೃತನ ಬಗ್ಗೆ ಮಾಹಿತಿ ಪತ್ತೆಯಾಗಿದೆ.
ಪ್ರತಿವರ್ಷದಂತೆ ಜರುಗುವ ಅದ್ಧೂರಿ ವೀರಭದ್ರೇಶ್ವರ ಜಾತ್ರೆ ಇಂದು ಕೂಡ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಜರುಗಿದೆ.
ರಥ ಎಳೆಯುವ ವೇಳೆ ಭಕ್ತರು ಎಸೆದ ಉತ್ತತ್ತಿ ಆರಿಸುವಾಗ ರಥದ ಚಕ್ರದಡಿ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ಓರ್ವ ಭಕ್ತನ ತಲೆ ಮೇಲೆ ಚಕ್ರ ಹತ್ತಿಳಿದ ಪರಿಣಾಮ ತಲೆಬುರುಡೆ ಅಪ್ಪಚ್ಚಿಯಾಗಿದೆ.
ಕ್ಷಣಾರ್ಧದಲ್ಲಿ ನಡೆದ ಈ ಘಟನೆಯಿಂದ ನೆರೆದಿದ್ದ ಭಕ್ತರು ಬೆಚ್ಚಿದರು.
ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.