ರೋಣ-ನರಗುಂದ ಸಂಪರ್ಕ ಕಡಿತ: ಬೆಣ್ಣೆಹಳ್ಳದ ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆ ವಹಿಸಲು ಸೂಚನೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಧಾರವಾಡ ಜಿಲ್ಲೆಯ ಕುಂದಗೋಳ, ನವಲಗುಂದ ಮತ್ತು ಜಿಲ್ಲೆಯ ನರಗುಂದ, ರೋಣ ಭಾಗದಲ್ಲಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದ್ದರಿಂದ ಬೆಣ್ಣೆಹಳ್ಳದ ಪ್ರವಾಹ ಭೀತಿ ಎದುರಾಗಿದೆ. ಗುರುವಾರ ತಡರಾತ್ರಿಯೇ ಯಾವಗಲ್ ಗ್ರಾಮದ ಬಳಿಯ ಸೇತುವೆ ಜಲಾವೃತವಾಗಿ, ರೋಣ-ನರಗುಂದ ಸಂಪರ್ಕ ಕಡಿತಗೊಂಡಿದೆ. ಬೆಣ್ಣೆಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜಿಲ್ಲಾಡಳಿತ ಹೈಅಲರ್ಟ್ ಘೋಷಿಸಿ, ಬೆಣ್ಣೆಹಳ್ಳದ ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದೆ.

Advertisement

ಮುಂಗಾರು ಪೂರ್ವದಲ್ಲಿ ಅಬ್ಬರಿಸಿ ಮರೆಯಾಗಿದ್ದ ಮಳೆ ಮತ್ತೊಮ್ಮೆ ಹೊಸ ಅವತಾರ ತಾಳಿ ಪ್ರತ್ಯಕ್ಷವಾಗಿದ್ದು, ಬುಧವಾರ ಹಾಗೂ ಗುರುವಾರ ಅಳತೆಮೀರಿ ಸುರಿದ ಮಳೆಯ ರೌದ್ರಾವತಾರಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಬುಧವಾರ ರಾತ್ರಿಯಿಡೀ ಸುರಿದ ಮಳೆಯಿಂದ ಬೆಟಗೇರಿಯ ಕೆಲ ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಬೆಟಗೇರಿ ಹಾಗೂ ಗಂಗಿಮಡಿಯ ಕೆಲ ತಗ್ಗಿನ ಪ್ರದೇಶಗಳಿಗೆ ನೀರು ನುಗ್ಗಿತ್ತಲದೇ ರಸ್ತೆಗಳು ಮಳೆ ನೀರಿನಲ್ಲಿ ಮುಳುಗಿದ್ದವು. ಅಲ್ಲದೆ, ರೋಣ, ನರಗುಂದ ಭಾಗದಲ್ಲಿಯೂ ಪ್ರವಾಹ ಭೀತಿ ಸೃಷ್ಟಿಯಾಗಿದ್ದರೆ, ಮುಂಡರಗಿ, ಗಜೇಂದ್ರಗಡ, ಶಿರಹಟ್ಟಿ ಭಾಗದಲ್ಲಿ ಜಿಟಿಜಿಟಿ ಮಳೆ ಜನರನ್ನು ಮುದುರಿಸಿದೆ.

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಕುಂದ್ರಳ್ಳಿ ಗ್ರಾಮದ 24 ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ರಾತ್ರಿಯಿಡೀ ಜನ ಮಳೆ ನೀರನ್ನು ಹೊರಹಾಕಲು ಹರಸಾಹಸಪಟ್ಟರು. ಮನೆಯಲ್ಲಿನ ದವಸ-ಧಾನ್ಯಗಳು ನೀರು ಪಾಲಾಗಿರುವ ಬಗ್ಗೆ ವರದಿಯಾಗಿದೆ. ತಹಸೀಲ್ದಾರ ವಾಸುದೇವ ಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ.

ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಗಜೇಂದ್ರಗಡ, ಮುಂಡರಗಿ, ಶಿರಹಟ್ಟಿ ತಾಲೂಕು ವ್ಯಾಪ್ತಿಯಲ್ಲಿ ಬುಧವಾರ ಸಂಜೆಯಿಂದ ಗುರುವಾರ ಬೆಳಗಿನ ಜಾವದವರೆಗೂ ಜಿಟಿಜಿಟಿ ಮಳೆಯಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಜೂನ್ 11ರಂದು ಬೆಳಗ್ಗೆ 8.30ರಿಂದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 559ರಷ್ಟು ಹೆಚ್ಚು ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಜಿಲ್ಲೆಯಲ್ಲಿ ಮುಂದಿನ ಮೂರು ದಿನ ಭಾರೀ ಮಳೆಯ ಮುನ್ಸೂಚಯಿರುವುದರಿಂದ ಆರೆಂಜ್-ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತುರ್ತು ಸಭೆ ನಡೆಸಿ ವಿಪತ್ತು ನಿರ್ವಹಣೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮಳೆ ಸಂದರ್ಭದಲ್ಲಿ ನದಿ, ಹಳ್ಳದಲ್ಲಿ ಈಜಾಡುವುದು, ಬಟ್ಟೆ ಒಗೆಯುವುದು, ಜಾನುವಾರುಗಳನ್ನು ತೊಳೆಯುವುದನ್ನು ನಿಷೇಧಿಸಿದ್ದಾರೆ. ಗುಡುಗು-ಮಿಂಚು ಸಮಯದಲ್ಲಿ ಸುರಕ್ಷಿತ ಸ್ಥಳದಲ್ಲಿ ನಿಲ್ಲಬೇಕು. ಅಪಾಯಕಾರಿ ಸೇತುವೆಯಲ್ಲಿ ಸಂಚರಿಸುವಾಗ ಎಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದ್ದಾರೆ.

ಮಳೆಯಿಂದ ಸಂಭವಿಸುವ ವಿಪತ್ತು ನಿರ್ವಹಣೆಗೆ ಜಿಲ್ಲಾಡಳಿತ ಸಹಾಯವಾಣಿ ತೆರೆದಿದ್ದು, ತುರ್ತು ಸಂದರ್ಭದಲ್ಲಿ ಸಾರ್ವಜನಿಕರು 08372-239177 ಅಥವಾ 1077 ಸಂಖ್ಯೆಗೆ ಕರೆ ಮಾಡಿ ಮಾಹಿತಿ, ಸಹಾಯ ಪಡೆಯಬಹುದು.


Spread the love

LEAVE A REPLY

Please enter your comment!
Please enter your name here