ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕೇಶವ ಬಲರಾಮ ಹೆಗಡೆವಾರ ಅವರಿಂದ ಜನ್ಮತಾಳಿದ ರಾಷ್ಟ್ರೀಯ ಸ್ವಯಂ ಸೇವಾ ಸಂಘ ದೇಶದ ಉನ್ನತಿಗೆ ಶ್ರಮಿಸಿದ ಏಕೈಕ ಶ್ರೇಷ್ಠ ಸಂಘವಾಗಿದ್ದು, 100 ಸಂವತ್ಸರಗಳನ್ನು ಕಂಡಿರುವ ಆರ್ಎಸ್ಎಸ್ ದೇಶದ ಬೆಳವಣಿಗೆಯಲ್ಲಿ ಮಹತ್ತರ ಕೊಡುಗೆ ನೀಡಿದೆ ಎಂದು ಆರ್ಎಸ್ಎಸ್ನ ಗದಗ ಜಿಲ್ಲಾ ಪ್ರಮುಖ ಮೋಹನ ಗೌಡ ಹೇಳಿದರು.
ಅವರು ಗುರುವಾರ ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಆರ್ಎಸ್ಎಸ್ 100 ವರ್ಷಗಳ ಸಂಭ್ರಮಾಚರಣೆಯಲ್ಲಿ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು.
ಸ್ವತಂತ್ರ ಭಾರತದ ಕಲ್ಪನೆಯಲ್ಲಿ ಉದಯಿಸಿದ ಆರ್ಎಸ್ಎಸ್ ಸ್ವಾತಂತ್ರ್ಯ ಗಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದು, ಸಂಘವು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠ ಸಂಘ ಎನ್ನುವ ಕೀರ್ತಿಗೆ ಪಾತ್ರವಾಗಿದೆ, ಸಂಘದ ಸೇವಕರು ದೇಶದ ಬಗ್ಗೆ ಸದಾ ತುಡಿಯುವ ಮನಸ್ಸು ಹೊಂದಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನೂರು ವರ್ಷಗಳ ಹಿಂದೆ ವಿಜಯದಶಮಿಯ ಪವಿತ್ರ ಸಂದರ್ಭದಲ್ಲಿ ಸ್ಥಾಪಿಸಲಾಗಿದ್ದು, ದೇಶ ನನಗೆ ಏನು ನೀಡಿದೆ ಎನ್ನುವ ಬದಲು ದೇಶಕ್ಕೆ ನನ್ನಿಂದ ಏನು ಕೊಡುಗೆ ನೀಡಲು ಸಾಧ್ಯ ಎಂಬ ಬಗ್ಗೆ ಚಿಂತಿಸುವ ಕಾರ್ಯವಾಗಬೇಕು. ಸಮಾಜದ ಏಳ್ಗೆಗಾಗಿ ಶ್ರಮಿಸುವಲ್ಲಿ ಯುವ ಪಡೆ, ದೇಶದ ನಾಗರಿಕರು ನಿರಂತರವಾಗಿ ಸಾಗಬೇಕಾಗಿದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಯಲ್ಲಪ್ಪ ಲಿಂಗಶೆಟ್ಟಿ ಮಾತನಾಡಿ, ಸಂಘವು ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡಿದ್ದು, ದೇಶದ ಶ್ರೇಷ್ಠತೆ, ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಬೆಳಗುವ ಕಾರ್ಯವನ್ನು ಮಾಡಿದೆ ಎಂದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ನೂರು ವರ್ಷಗಳ ಹಿಂದೆ ರಾಷ್ಟ್ರೀಯತೆಯ ಬೀಜವನ್ನು ದೇಶದ ಜನತೆಯಲ್ಲಿ ಬಿತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ವರ್ಷವನ್ನು ವೀಕ್ಷಿಸುವುದು ಪ್ರಸ್ತುತ ನಮ್ಮೆಲ್ಲ ಸ್ವಯಂಸೇವಕರಿಗೆ ದೊರೆತ ಸೌಭಾಗ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ನೂರಾರು ಸ್ವಯಂಸೇವಕರು ಪಾಲ್ಗೊಂಡು ವೀರ ಘೋಷಣೆಗಳನ್ನು ಮೊಳಗಿಸಿದರು.



