ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಹಾಗೂ ಮುಂಡರಗಿ ತಾಲೂಕಿನ ರೈತರು ಕಡಲೆ ಉತ್ಪನ್ನ/ಖರೀದಿ ಪ್ರಕರಣದಲ್ಲಿ ರೈತರು ಮೋಸ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಅನ್ಯಾಯಕ್ಕೊಳಗಾದ ರೈತರಿಗೆ ಸರ್ಕಾರದಿಂದ ನ್ಯಾಯ ಒದಗಿಸಲು ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಉದ್ಯಮಶೀಲತೆ ಜೀವನೋಪಾಯ ಸಚಿವರಾದ ಶರಣಪ್ರಕಾಶ ಪಾಟೀಲ ಅವರಿಗೆ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಅವರು ಮನವಿ ಸಲ್ಲಿಸಿ ಒತ್ತಾಯಿಸಿದರು.
ಕಳೆದ ವರ್ಷ ಗದಗ ಹಾಗೂ ಮುಂಡರಗಿ ತಾಲೂಕಿನ ಗ್ರಾಮದ ರೈತರು ಎನ್.ಆರ್.ಎಲ್.ಎಮ್ ಸಂಜೀವಿನಿ ಯೋಜನೆ ಅಡಿ ನೇಮಕಗೊಂಡಿರುವ ಡಿ.ಪಿ.ಎಮ್. ಟಿ.ಪಿ.ಎಮ್. ಹಾಗೂ ಕ್ಲಸ್ಟರ್ ಸುಪರ್ವೈಸರ್ ಮಧ್ಯಸ್ಥಿಕೆಯಲ್ಲಿ ಡಾವಣಗೇರಿಯ ನೂತನ ಎಂಟರ್ ಪ್ರೈಸಸ್ ನ ಮಾರುತಿಗೌಡ ಜಿ.ಎಸ್. ಎಂಬ ವ್ಯಕ್ತಿ ರೈತ ಉತ್ಪಾದಕರ ಗುಂಪುಗಳ ಮೂಲಕ ರೈತರು ಬೆಳೆದ ಕಡಲೆಯನ್ನು ಖರೀದಿ ಮಾಡಿ ಒಟ್ಟು 6.50 ಕೋಟಿ ಮೊತ್ತದ ಹಣವನ್ನು ಬಾಕಿ ಉಳಿಸಿಕೊಂಡು ಮೋಸ ಮಾಡಿದ್ದಾನೆ.
ಮೋಸಕ್ಕೆ ಒಳಗಾದ 9 ಗ್ರಾಮಗಳ 45ಕ್ಕೂ ಹೆಚ್ಚು ರೈತರು ಜಿಲ್ಲಾಧಿಕಾರಿ ಕಚೇರಿಯೆದುರು ಅಹೋರಾತ್ರಿ ಧರಣಿ ಮಾಡಿದ್ದು, ಕೆಲ ರೈತ ಮಹಿಳೆಯರು ಆತ್ಮಹತ್ಯೆಗೂ ಪ್ರಯತ್ನ ಪಟ್ಟಿದ್ದಾರೆ ಎಂದು ಎಸ್.ವಿ. ಸಂಕನೂರ ಅವರು ಸಚಿವರ ಗಮನಕ್ಕೆ ತಂದರು. ಈ ಎಲ್ಲ ವಿಷಯವನ್ನು ಆಲಿಸಿದ ಸಚಿವರು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.