ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸದ್ಗುರು ಮಹಾದೇವ ತಾತನವರು ನನ್ನದು ಶರಣ ಧರ್ಮ ಎಂದು ಹೇಳುತ್ತಿದ್ದರು. ಈ ಧರ್ಮದಲ್ಲಿ ಸತ್ಯ, ನ್ಯಾಯ, ನೀತಿ ಹಾಗೂ ಸರ್ವಸಮಾನತೆಗಳು ಮೂಲಮಂತ್ರಗಳೆಂದು ಹೆಸರಿಸುತ್ತಿದ್ದರು. ಇಂಥ ಮೂಲಮಂತ್ರಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಸ್ವೀಕರಿಸಬೇಕೆಂದು ತಿಳಿ ಹೇಳುತ್ತಿದ್ದರು ಎಂದು ಅಭಿನವ ಶಿವಲಿಂಗೇಶ್ವರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನರೇಗಲ್ಲ ಪಟ್ಟಣದ ಶಾಖಾ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ನವಲಿ ಕಟ್ಟಿಮನಿ ಸಂಸ್ಥಾನ ಹಿರೇಮಠದಲ್ಲಿ ಹಂಪಸಾಗರದ ಸದ್ಗುರು ಮಹಾದೇವ ತಾತನವರ ಜಾತ್ರಾ ಮಹೋತ್ಸವ ಹಾಗೂ ರಂಭಾಪುರಿ ಜಗದ್ಗುರುಗಳ 34ನೇ ವರ್ಷದ ಪೀಠಾರೋಹಣದ ವರ್ಧಂತಿ ಮಹೋತ್ಸವದ ಆಮಂತ್ರಣವನ್ನು ನೀಡಿ ಅವರು ಆಶೀರ್ವಚನ ನೀಡಿದರು.
ಸದ್ಗುರು ಮಹಾದೇವ ತಾತನವಂರು ಒಮ್ಮೊಮ್ಮೆ ಉಗ್ರಕೋಪಿ, ಮಗದೊಮ್ಮೆ ವಾತ್ಸಲ್ಯಮಯಿ. ಅವರ ಮನಸ್ಸು ತಾಯಿಯ ಅಂತಃಕರಣಕ್ಕಿಂತಲೂ ಮಿಗಿಲಾಗಿರುತ್ತಿತ್ತು. ಆದರೆ, ಅದನ್ನು ಎಲ್ಲಿಯೂ ಪ್ರಕಟಪಡಿಸುತ್ತಿರಲಿಲ್ಲ. ಅವರಲ್ಲಿಗೆ ಬಂದ ಭಕ್ತರಿಗೆ ತಾವೇ ಪ್ರಸಾದ ತಯಾರಿಸಿ ಅಕ್ಕರೆಯಿಂದ ಉಣಬಣಿಸುತ್ತಿದ್ದರು. ಇದು ಪ್ರಸಾದಯೋಗ ಎಂದು ಬಂದ ಭಕ್ತರಿಗೆ ಹೇಳುತ್ತಿದ್ದರು. ತಾತ ಎಂದೂ ಸೀಮಿತ ಜನಾಂಗದ ಗುರುವಾಗಿರಲಿಲ್ಲ. ಅವರು ಎಲ್ಲರ ಅಜ್ಞಾನವನ್ನು ಕಳೆಯಲು ಬಂದ ಮಹಾಸದ್ಗುರು ಎಂದರು.
ಶ್ರೀ ಕ್ಷೇತ್ರ ಹಂಪಸಾಗರದಲ್ಲಿ ಫೆ.1ರಿಂದ ಫೆ. 4ರವರೆಗೆ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಫೆ. 1ರಂದು ಬೆಳಿಗ್ಗೆ 11.30ಕ್ಕೆ ರಂಭಾಪುರಿ ಜಗದ್ಗುರುಗಳ 34ನೇ ವರ್ಷದ ಪೀಠಾರೋಹಣದ ವದಂತಿ ಮಹೋತ್ಸವದ ಅಂಗವಾಗಿ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಲಿದೆ. ಫೆ. 3ರ ಸಂಜೆ 6ಕ್ಕೆ ಖ್ಯಾತ ವಾಗ್ಮಿ ನಿಹಾರಿಕಾ ಮಂಜುನಾಥ ಉಪನ್ಯಾಸ ನೀಡಲಿದ್ದಾರೆ. ಫೆ. 4ರಂದು ಮಹಾರಥೋತ್ಸವ ಜರುಗಲಿದ್ದು, ಎಲ್ಲರೂ ಆಗಮಿಸಿ ಅಜ್ಜನ ಆಶೀರ್ವಾದಕ್ಕೆ ಪಾತ್ರರಾಗಬೇಕು ಎಂದರು.
ಡಾ. ಎಂ.ಸಿ. ಚಪ್ಪನಮಠ, ರುದ್ರಮುನಿ ಹಿರೇಮಠ, ಡಾ. ಎಲ್.ಎಸ್. ಗೌರಿ, ಸೋಮನಾಥ ಸಂಗನಾಳಮಠ, ಜಗದೀಶ ಸಂಗನಾಳಮಠ, ಡಾ. ಎ.ಎಸ್. ಕುರಿ, ಉಡಚಪ್ಪ ತಳವಾರ, ಸಕ್ರಪ್ಪ ಹಡಪದ, ಮುತ್ತಣ್ಣ ಹಡಪದ, ಎಂ.ಎಸ್. ಪಾಯಪ್ಪಗೌಡ್ರ, ಮಹಾದೇವಯ್ಯ ನವಲಿಹಿರೇಮಠ ಸೇರಿದಂತೆ ಇತರರಿದ್ದರು.