ವಿಜಯಸಾಕ್ಷಿ ಸುದ್ದಿ, ಗದಗ: ಮುದ್ರಣ ಕಾಶಿ ಖ್ಯಾತಿಯ ಗದಗ ಜಿಲ್ಲೆ ಐತಿಹಾಸಿಕ ಹಿನ್ನೆಲೆಯ ತಾಣ. ಸೌಹಾರ್ದತೆ ಎಂದಾಕ್ಷಣ ನೆನಪಿಗೆ ಬರುವ ಜಿಲ್ಲೆ ಗದಗ. ಸಂಗೀತ ಲೋಕದ ಬ್ರಹ್ಮ, ಪಂಡಿತ ಪುಟ್ಟರಾಜ ಗುರುವರ್ಯರು ನಡೆದಾಡಿ ಪಾವನಗೊಳಿಸಿದ ಈ ಪುಣ್ಯಭೂಮಿ ಗದುಗಿನಲ್ಲಿ ಜರುಗುವ ಕಾರ್ಯಕ್ರಮಗಳನ್ನು ನಮ್ಮ ರಾಜ್ಯದ ನೆರೆಯ ಬಹುತೇಕ ಜಿಲ್ಲೆಯ ಸಾಹಿತಿಗಳು ಪ್ರಶಂಸಿಸಿ ಗೌರವಿಸುತ್ತಾರೆ. ಇಂತಹ ವಿಶಿಷ್ಟ ಪರಂಪರೆಯ ಗದುಗಿನಲ್ಲಿ ಜರುಗುವ ಸಂಗೀತ, ಸಾಹಿತ್ಯ, ಕಲೆ ಮುಂತಾದ ಕಾರ್ಯಕ್ರಮಗಳು ಬಹಳಷ್ಟು ನೆಮ್ಮದಿ ಮತ್ತು ಖುಷಿ ನೀಡುವ ಮೂಲಕ ಇತರರಿಗೆ ಮಾದರಿ ಎನ್ನುವಂತಿರುತ್ತವೆ.
ಈ ನಿಟ್ಟಿನಲ್ಲಿ ಗದಗ ಪರಿಸರದಲ್ಲಿ ನಡೆಯುವ ಕಾರ್ಯಕ್ರಮ ಅರ್ಥಪೂರ್ಣವಾಗಿರಲೆಂಬುದೇ ಗದಗ ಜಿಲ್ಲೆಯ ಪ್ರಜ್ಞಾವಂತ ಹಿರಿಯರ ಆಶಯ. ಆದರೆ ಇತ್ತೀಚೆಗೆ ಗದಗ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜರುಗುವ ಕಾರ್ಯಕ್ರಮಗಳು ಬಹುತೇಕ ಹಿರಿಯ ಸಾಹಿತಿಗಳಿಗೆ ಬೇಸರವನ್ನುಂಟು ಮಾಡಿದೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಐ.ಕೆ. ಕಮ್ಮಾರ ವಿಷಾದಿಸಿದ್ದಾರೆ.
ಜ.20 ಮತ್ತು 21ರಂದು ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಈ ವಿಷಯ ಗೊತ್ತಾಗಿದ್ದು, ವಾಟ್ಸ್ಆಪ್ ಹಾಗೂ ಪತ್ರಿಕೆಗಳ ಮೂಲಕ ಮಾತ್ರ. ಜಿಲ್ಲಾಮಟ್ಟದ ಸಮ್ಮೇಳನದ ಬಗ್ಗೆ ಯಾರಿಗೂ ತಿಳಿಸದೇ ಕೇವಲ ಬೆರಳಣಿಕೆಯಷ್ಟು ಪುಣ್ಯಾತ್ಮರನ್ನೇ ಆಹ್ವಾನಿಸಿ ತೆಗೆದುಕೊಳ್ಳುವ ನಿರ್ಧಾರ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ಕನ್ನಡದ ಮನಸ್ಸುಗಳನ್ನು ಬೆಸೆಯುವಂತಿರಬೇಕು. ಜಿಲ್ಲೆಯ ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಕಷ್ಟದ ಕೆಲಸವಾದರೂ, ಜಿಲ್ಲೆಯ ಬಹುತೇಕ ಸಾಧಕ, ಸಾಹಿತಿಗಳ ಗಮನಕ್ಕೆ ಬಾರದಿರುವುದು ವಿಷಾದನೀಯ. ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಂದಿನ ದಿನಮಾನಗಳಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವಂತಾಗಲಿ ಎಂದು ತಿಳಿಸಿದ್ದಾರೆ.


