ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಮಾಜಿ ಸೈನಿಕರ ಸಂಘವು ಗದಗಿನಲ್ಲಿ ನಿರ್ಮಿಸಿರುವ ಸೈನಿಕ ಸಮುದಾಯ ಭವನ ಹಾಗೂ ತರಬೇತಿ ಕೇಂದ್ರವು ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದು ಮಲ್ಲಸಮುದ್ರದ ಓಂಕಾರೇಶ್ವರ ಹಿರೇಮಠದ ಪೂಜ್ಯ ಫಕ್ಕೀರೇಶ್ವರ ಪಟ್ಟಾಧ್ಯಕ್ಷರು ಹೇಳಿದರು.
ಅವರು ಸೈನಿಕ ಸಮುದಾಯ ಭವನ ಹಾಗೂ ತರಬೇತಿ ಕೇಂದ್ರದಲ್ಲಿ ಏರ್ಪಡಿಸಿದ್ದ ದಾನಿಗಳಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ದೇಶದ ರಕ್ಷಣೆ ಮತ್ತು ಹಿತವನ್ನು ಕಾಪಾಡುವಲ್ಲಿ ಸೈನಿಕರು ಹಗಲಿರುಳು ತಮ್ಮ ಜೀವದ ಹಂಗು ತೊರೆದು ಕಾರ್ಯ ಮಾಡುತ್ತಿದ್ದಾರೆ. ಅವರಿಗೆ ನೈತಿಕ ಬಲ, ಆತ್ಮಸ್ಥೈರ್ಯವನ್ನು ತುಂಬುವ ಮೂಲಕ ನಾವು ಸದಾಕಾಲ ಸೈನಿಕರ ಶ್ರೇಯೋಭಿವೃದ್ಧಿಯನ್ನು ಬಯಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಜಿ.ಬಿ. ಮಾಲಗಿತ್ತಿಮಠ ಮಾತನಾಡಿ, ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ 40 ಲಕ್ಷ ರೂ, ಸಂಸದ ಬಸವರಾಜ ಬೊಮ್ಮಾಯಿ 5 ಲಕ್ಷ ರೂ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ 4 ಲಕ್ಷ ರೂ, ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು 2 ಲಕ್ಷ ಹೀಗೆ ಒಟ್ಟು 51 ಲಕ್ಷ ರೂ.ಗಳಷ್ಟು ಹಣ ಜನಪ್ರತಿನಿಧಿಗಳು ಸರ್ಕಾರದ ಅನುದಾನದಿಂದ ಬಿಡುಗಡೆಗೊಳಿಸಿ ಮಾರ್ಗದರ್ಶನ ನೀಡಿದ್ದರ ಪರಿಣಾಮವಾಗಿ ಈ ಕಾರ್ಯ ಸಾಕಾರಗೊಳ್ಳಲು ಕಾರಣವಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮದರ್ಶಿ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರೂ ಸಹ 1 ಲಕ್ಷ 50 ಸಾವಿರ ರೂ.ಗಳನ್ನು ಪ್ರಸಾದವಾಗಿ ನೀಡಿದ್ದು ಇವರೆಲ್ಲರನ್ನು ಸಂಘವು ಸದಾಕಾಲ ಸ್ಮರಿಸುವದು ಎಂದರು.
ಸಮಾರಂಭದಲ್ಲಿ ದಾನಿಗಳನ್ನು ಹಾಗೂ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದವರನ್ನು, ಶ್ರಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಕಾರ್ಯದರ್ಶಿ ಸಿ.ಜಿ. ಸೊನ್ನದ ಸ್ವಾಗತಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಎಸ್.ಎಫ್. ಹೊನ್ನಪ್ಪನವರ, ಸಂಘಟನಾ ಕಾರ್ಯದರ್ಶಿ ಈರಣ್ಣ ತಳ್ಳಿಕೇರಿ, ಸಹ ಕಾರ್ಯದರ್ಶಿ ಮಹೇಶ್ ಆಶಿ, ಮಹಮ್ಮದ್ ಹನೀಫ್ ಶೇಖಬಾಯಿ, ನಿರ್ದೆಶಕರಾದ ಬಿ.ಎಚ್. ಅಬ್ಬಿಗೇರಿ, ಎಚ್.ಬಿ. ಜಂಗಣ್ಣವರ, ಲಲಿತಾ ಕುರಹಟ್ಟಿ, ಶರಣಪ್ಪ ಸರ್ವಿ, ವೀರಪ್ಪ ಬಿಂಗಿ, ಶಿವಲೀಲಾ ಬಾವಿಕಟ್ಟಿ, ಕೆ.ಎಸ್. ಹಿರೇಮಠ, ಎ.ಎಂ. ತಹಸೀಲ್ದಾರ, ರಘುನಾಥ್ರೆಡ್ಡಿ ಶೆಟ್ರಡ್ಡಿ, ಬಿ.ಬಿ. ಅರವಟಗಿಮಠ, ಚನ್ನಯ್ಯ ಬಳಗಾನೂರಮಠ, ಎಸ್.ಎಸ್. ವಡ್ಡಿನ, ಬಸನಗೌಡ ಪಾಟೀಲ, ಎಸ್.ಎಂ. ಮಡಿವಾಳರ, ಮೀನಾಕ್ಷಿ ಬದಿ, ಶಂಕರಗೌಡ ಪಾಟೀಲ, ದ್ರಾಕ್ಷಾಯಣಿ ಲಕ್ಕುಂಡಿ ಮುಂತಾದವರಿದ್ದರು.
ಈ ಕಟ್ಟಡ ಸುಂದರವಾಗಿ ರೂಪುಗೊಳ್ಳುವಲ್ಲಿ ಸಂಘದ ಸರ್ವ ಸದಸ್ಯರ ದೇಣಿಗೆ, ಸಹಾಯ ಸಹಕಾರ ತುಂಬಾ ದೊಡ್ಡದು. ಇದೆಲ್ಲವೂ ಒಗ್ಗಟ್ಟಿನ ಪ್ರತಿಫಲ. ಇದಕ್ಕೆ ಸರ್ಕಾರ ಮತ್ತು ಜನಪ್ರತಿನಿಧಿಗಳ ಸಹಕಾರವನ್ನು ಮರೆಯುವಂತಿಲ್ಲ ಎಂದು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಜಿ.ಬಿ. ಮಾಲಗಿತ್ತಿಮಠ ಹೇಳಿದರು.



