ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಣ್ಣೆತ್ತಿನ ಅಮವಾಸ್ಯೆ ಹಬ್ಬದ ಆಚರಣೆಗಾಗಿ ಬುಧವಾರ ಪಟ್ಟಣದಲ್ಲಿ ಮಣ್ಣೆತ್ತಿನ ಮೂರ್ತಿಗಳ ಮಾರಾಟದ ಭರಾಟೆ ಜೋರಾಗಿಯೇ ನಡೆಯಿತು. ಬೆಳಿಗ್ಗೆಯಿಂದಲೇ ಮೂರ್ತಿ ತಯಾರಕರು ಪಟ್ಟಣದ ಪೇಟೆ ಹನಮಂತ ದೇವಸ್ಥಾನದ ಪ್ರಾಂಗಣದಲ್ಲಿ ಸುಂದರ ಮಣ್ಣೆತ್ತಿನ ಮೂರ್ತಿಗಳ ಮಾರಾಟಕ್ಕೆ ಅಣಿಯಾಗಿದ್ದರು. ಮೂರ್ತಿಗಳ ಖರೀದಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಅಲ್ಲಿ ಎತ್ತಿನ ಪರಸಿ(ಜಾತ್ರೆ)ಯೇ ಉಂಟಾಗಿತ್ತು.
ಲಕ್ಷ್ಮೇಶ್ವರ ಪಟ್ಟಣದಲ್ಲಿನ ಹತ್ತಾರು ಕುಂಬಾರರ ಮನೆತನಗಳಿಂದ 20 ಸಾವಿರಕ್ಕೂ ಹೆಚ್ಚಿನ ಮೂರ್ತಿಗಳು ಸಿದ್ಧವಾಗುತ್ತವೆಯಾದರೂ ಇಲ್ಲಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಡಾವಣಗೆರೆ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಕೊಪ್ಪಳ, ಬೆಳಗಾವಿ ಅನೇಕ ಜಿಲ್ಲೆಗಳಿಗೆ ಹಬ್ಬದ ಮುನ್ನಾದಿನ ಹೋಲ್ಸೇಲ್ ದರದಲ್ಲಿ ಮಾರಾಟವಾದ ಕಾರಣ ಸ್ಥಳೀಯವಾಗಿ ಎತ್ತಿನ ಮೂರ್ತಿಗಳ ಸಂಖ್ಯೆ ಕಡಿಮೆಯಾಗಿದೆ. ಈ ಕಾರಣದಿಂದ ಬೆಲೆಯಲ್ಲೂ ಹೆಚ್ಚಳವಾಗಿದ್ದು ಕಂಡು ಬಂದಿತು.
20 ರೂಗಳಿಗೆ ಮಾರುತ್ತಿದ್ದ ಅತೀ ಚಿಕ್ಕ ಮೂರ್ತಿಗಳೂ 50 ರೂ ಮೇಲ್ಪಟ್ಟು ಮಾರಾಟವಾದವು. ಬಣ್ಣದ ಬದಲಾಗಿ ಈ ವರ್ಷ ಪರಿಸರ ಸ್ನೇಹಿ ಮೂರ್ತಿಗಳಿಗೂ ಬೇಡಿಕೆಯಿತ್ತು. ಕೆಲವು ವಿಶೇಷ ಅಲಂಕಾರದ ಮಣ್ಣಿನ ದೊಡ್ಡ ಗಾತ್ರದ ಎತ್ತುಗಳು 2000 ರೂವರೆಗೂ ಮಾರಾಟವಾದವು. ರೈತರಷ್ಟೇ ಅಲ್ಲದೇ ಪ್ರತಿ ಮನೆಯಲ್ಲೂ ಎತ್ತಿನ ಮೂರ್ತಿಗಳಿಗೆ ವಿಶೇಷ ಪೂಜೆ ಮಾಡಿ ಸಂಭ್ರಮದಿಂದ ಹಬ್ಬ ಆಚರಿಸಿದರು.