ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ದೀಪ ಮನುಕುಲದ ಅಜ್ಞಾನ ಮತ್ತು ಅಂಧಕಾರವನ್ನು ಹೋಗಲಾಡಿಸಿ ಧರ್ಮದ ಬೆಳಕಿನೆಡೆಗೊಯ್ದು ಸನ್ಮಾರ್ಗ ತೋರಿಸುವ ದಿವ್ಯ ಶಕ್ತಿಯಾಗಿದೆ. ಧಾರ್ಮಿಕ ಕಾರ್ಯಗಳು ಸಮಾಜದಲ್ಲಿ ಶಾಂತಿ-ನೆಮ್ಮದಿಯನ್ನು ನೆಲೆಸುವಂತೆ ಮಾಡುತ್ತವೆ ಎಂದು ಕಾಗಿನೆಲೆ ಕನಕಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ಅವರು ಪಟ್ಟಣದ ಮ್ಯಾಗೇರಿ ಓಣಿಯ ಬೀರೇಶ್ವರ ಟ್ರಸ್ಟ್ ಕಮಿಟಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 11ನೇ ವರ್ಷದ ಕಾರ್ತಿಕೋತ್ಸವ ಹಾಗೂ ವಿವಿಧ ಕಾರ್ಯಕ್ರಮಗಳ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಕತ್ತಲೆ ಎಂಬ ಅಜ್ಞಾನ ಕಳೆದು ಸುಜ್ಞಾನದ ಬೆಳಕು ಮೂಡಿಸುವುದು ಕಾರ್ತಿಕೋತ್ಸವದ ಉದ್ದೇಶವಾಗಿದೆ. ಈ ಜಗತ್ತಿನಲ್ಲಿ ಜನ್ಮತಾಳಿದ ಮೇಲೆ ನಮ್ಮನ್ನು ರಕ್ಷಣೆ ಮಾಡುವದು ನಮ್ಮ ಹಣ, ಸಂಪತ್ತು, ಜಾತಿ, ಸಮಾಜವಲ್ಲ. ನಮ್ಮನ್ನು ರಕ್ಷಣೆ ಮಾಡುವದು, ಮೋಕ್ಷದೆಡೆಗೆ ಕರೆದುಕೊಂಡು ಹೋಗುವದು ಭಗವಂತನ ನಾಮಸ್ಮರಣೆ, ಧರ್ಮ ಮಾರ್ಗದ ನಡೆಯಾಗಿದೆ. ಯುವಕರು ದುಶ್ಚಟಗಳಿಗೆ ಬಲಿಯಾಗದೆ, ಮೌಢ್ಯತೆಗಳಿಗೆ ಆದ್ಯತೆ ನೀಡದೆ, ಶಿಕ್ಷಣ ಕ್ರೀಡೆ, ಸಂಗೀತ, ಜಾನಪದ ಕಲೆಗಳನ್ನು ರೂಢಿಸಿಕೊಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕರಾದ ರಾಮಣ್ಣ ಲಮಾಣಿ ಹಾಗೂ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಸಮಾಜದಲ್ಲಿ ಧಾರ್ಮಿಕ ಚಟುವಟಿಕೆಗಳು ಹೆಚ್ಚು ಹೆಚ್ಚು ನಡೆಯುವಂತಾದರೆ ಅಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ. ಜಾಣರ ಸಮೂಹ ಸೃಷ್ಟಿಸಿದ ಅನುಭವಿಕ ಅದ್ಭುತ ಸಾಹಿತ್ಯವೇ ಜಾನಪದವಾಗಿದೆ. ಗ್ರಾಮೀಣ ಜನರ ಜಾನಪದ ಹಾಡು, ಒಗಟು, ಲಾವಣಿ, ಸೋಬಾನೆ ಹಾಡು, ಕುಟ್ಟುವ-ಬೀಸುವ ಪದ, ಹಂತಿ ಹಾಡು, ಡೊಳ್ಳಿನ ಹಾಡು, ಭಜನೆ ಹಾಡುಗಳಲ್ಲಿ ಜಾನಪದ ಸಾಹಿತ್ಯವೇ ತುಂಬಿಕೊಂಡಿದೆ. ಹಾಲುಮತ ಸಮಾಜದವರು ಜಾನಪದ ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದೆ. ಈ ಪರಂಪರೆಯನ್ನು ಯುವ ಸಮುದಾಯ ಮುಂದುವರೆಸಿಕೊAಡು ಹೋಗಬೇಕು ಎಂದರು.
ಈ ಸಂದರ್ಭದಲ್ಲಿ ಬೀರೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ನಾಗರಾಜ ಕೋರಿ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಪಿಎಸ್ಐ ನಾಗರಾಜ ಗಡದ, ಮುಖಂಡರಾದ ನಿಂಗಪ್ಪ ಬನ್ನಿ, ಶೇಕಣ್ಣ ಕಾಳೆ, ವೀರೇಂದ್ರ ಪಾಟೀಲ್, ನೀಲಪ್ಪ ಶೇರಸೂರಿ, ಗಂಗಪ್ಪ ದುರಗಣ್ಣವರ, ನೀಲಪ್ಪ ಪೂಜಾರ ಮಂಜುನಾಥ ಘಂಟಿ, ಭಾಗ್ಯಶ್ರೀ ಬಾಬಣ್ಣ, ಜಯಕ್ಕ ಕಳ್ಳಿ, ನಾಗರಾಜ ಮಡಿವಾಳರ, ಅಣ್ಣಪ್ಪ ರಾಮಗೇರಿ, ಮಂಜುನಾಥ. ಕೊಕ್ಕರಗುಂದಿ, ಶಿವಯೋಗಿ ಗಡ್ಡದೇವರಮಠ, ಯಲ್ಲಪ್ಪ ಸೂರಣಗಿ ಅಮರಪ್ಪ ಗುಡಗುಂಟಿ, ಮಲ್ಲಪ್ಪ ಗುಡಗುಂಟಿ, ಶಿದ್ದಪ್ಪ ಪೂಜಾರ, ಪುಟ್ಟಪ್ಪ ಕೋರಿ ಸೇರಿದಂತೆ ಅನೇಕರು ಇದ್ದರು.
ನ್ಯಾಯವಾದಿ ಮಹೇಶ ಹಾರೋಗೇರಿ ಉಪನ್ಯಾಸ ನೀಡಿದರು. ವಿ.ಜಿ. ಪಡಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಸಾಧಕರು ಹಾಗೂ ಪ್ರತಿಭಾವಂತರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಸಾನ್ನಿಧ್ಯವನ್ನು ಹುಲ್ಲೂರು ಅಮೋಘಿಮಠದ ಸಿದ್ದಯ್ಯ ಸ್ವಾಮಿಗಳು ವಹಿಸಿದ್ದರು.
ಇದಕ್ಕೂ ಮೊದಲು ಕಾಗಿನೆಲೆ ಶ್ರೀಗಳನ್ನು ಹಾವಳಿ ಆಂಜನೇಯ ದೇವಸ್ಥಾನದಿಂದ ಪೂರ್ಣ ಕುಂಬ ಹೊತ್ತ ಮುತೈದೆಯರು ಡೊಳ್ಳಿನ ವಾದ್ಯಗಳಿಂದ ಆದ್ದೂರಿ ಸ್ವಾಗತದೊಂದಿಗೆ ಬೀರೇಶ್ವರ ದೇವಸ್ಥಾನಕ್ಕೆ ಕರೆತರಲಾಯಿತು. ಕಾಗಿನೆಲೆ ಶ್ರೀಗಳು ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮ ನಂತರ ಕರ್ನಾಟಕ ಮೇಲೋಡಿಸ್ ಮುಂಡರಗಿ ಜನಪದ ರಸಮಂಜರಿ, ಹಾಗೂ ನಿನಗಿಂತ ನಾ ಬೆರಕಿ ಡೊಳ್ಳಿನ ಪದಗಳ ಕಾರ್ಯಕ್ರಮ ಜರುಗಿತು. ಈಶ್ವರ ಮೆಡ್ಲೆರಿ, ನಾಗರಾಜ ಶಿಗ್ಲಿ, ನೀಲಪ್ಪ ಪಡಗೇರಿ, ಮಲ್ಲೇಶ ಗೊಜಗೋಜಿ ಕಾರ್ಯಕ್ರಮ ನಿರ್ವಹಿಸಿದರು. ಕಾಗಿನೆಲೆ ಕನಕಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮಿಗಳಿಗೆ ಸಮಾಜದ ವತಿಯಿಂದ ತುಲಾಭಾರ ಮಾಡಲಾಯಿತು.