ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರಾಮನಾಮ ಜಪ ಪಠಿಸುವುದರಿಂದ ಮನದ ಕ್ಲೇಷ ದೂರವಾಗುತ್ತದೆ. ರಾಮನಾಮ ಜಪವನ್ನು ನಿತ್ಯವೂ ಅನವರತ ಮಾಡುವುದರಿಂದ ಮೋಕ್ಷ ಮಾರ್ಗವೂ ಸುಲಭವಾಗುತ್ತದೆ. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಹೆಬ್ಬಳ್ಳಿಯಲ್ಲಿ 15 ಕೋಟಿ ಶ್ರೀ ರಾಮನಾಮ ಜಪ ಸಂಕಲ್ಪ ಮಾಡಲಾಗಿದೆ ಎಂದು ಪೂಜ್ಯ ಶ್ರೀ ದತ್ತಾವಧೂತ ಮಹಾರಾಜರು ಹೇಳಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ನೆರೆದಿದ್ದ ಭಕ್ತರನ್ನುದ್ದೇಶಿಸಿ ಅವರು ಆಶೀರ್ವಚನ ನೀಡಿದರು.
ನರೇಗಲ್ಲದ ಭಕ್ತರು ಹತ್ತು-ಹದಿನೈದು ಜನರ ಒಂದು ಗುಂಪನ್ನು ಮಾಡಿಕೊಂಡು, ಗುಂಪಿನ ಸದಸ್ಯರು ತಮಗೆ ಅನುಕೂಲವಾದ ದಿನದಂದು ಹೆಬ್ಬಳ್ಳಿಗೆ ಬಂದು ಅಲ್ಲಿ ತಮಗೆ ಅನುಕೂಲವಾದಷ್ಟು ಜಪ ಮಾಡಬಹುದು ಎಂದು ಪೂಜ್ಯರು ತಿಳಿಸಿದರು.
ನೀವು ನಿಮ್ಮ ಮನೆಯಲ್ಲಿ ನಿತ್ಯವೂ ಸದ್ಗುರು ಶ್ರೀ ಬ್ರಹ್ಮಾನಂದರು ರಚಿಸಿರುವ ಮೋಕ್ಷಪ್ರಾಪ್ತಿಯ ಗುಟ್ಟನ್ನು ಪಠಿಸಬೇಕು. ಇದರಿಂದ ಶ್ರೀ ಬ್ರಹ್ಮಾನಂದರಿಗೆ ನಿಜವಾಗಿಯೂ ಬ್ರಹ್ಮಾನಂದವಾಗುತ್ತದೆ. ಮನೆಯಲ್ಲಿನ ಪ್ರತಿಯೊಬ್ಬರೂ ನಿತ್ಯವೂ ಒಂದು ಸಾರೆಯಾದರೂ ಇದನ್ನು ಪಠಿಸಿರಿ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ನರೇಗಲ್ಲ ಭಕ್ತರಿಗೆ ಪೂಜ್ಯ ಶ್ರೀ ದತ್ತಾವಧೂತ ಮಹಾರಾಜರು ಏನೇ ಅಪ್ಪಣೆ ಕೊಡಿಸಿದರೂ ಅದನ್ನು ಅತ್ಯಂತ ಪ್ರಾಂಜಲ ಮನಸ್ಸಿನಿಂದ ನೆರವೇರಿಸುತ್ತೇವೆ. ಇದಕ್ಕೆ ನಮಗೆ ಶ್ರೀ ದತ್ತಾತ್ರೇಯನ ಆಶೀರ್ವಾದವಿದೆ. ಗುರುಗಳ ಇಂದಿನ ಮಾತುಗಳು ನಮಗಂತೂ ವಿಶೇಷ ಆನಂದವನ್ನುಂಟು ಮಾಡಿವೆ ಎಂದರು.
ಸಭೆಯಲ್ಲಿ ಶ್ರೀವಲ್ಲಭಭಟ್ಟ ಸದರಜೋಷಿ, ರಂಗಣ್ಣನವರು ಕುಲಕರ್ಣಿ, ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ, ಎ.ಜಿ. ಕುಲಕರ್ಣಿ, ಆನಂದ ಕುಲಕರ್ಣಿ, ಅರುಣ ಗ್ರಾಮಪುರೋಹಿತ, ಪ್ರಶಾಂತ ಗ್ರಾಮಪುರೋಹಿತ, ಅಜಿತ ಕುಲಕರ್ಣಿ, ರಘುನಾಥ ಕೊಂಡಿ, ಎಸ್.ಎಚ್. ಕುಲಕರ್ಣಿ, ಆದರ್ಶ ಕುಲಕರ್ಣಿ, ಮಂಜುನಾಥ ಕುಲಕರ್ಣಿ, ನ್ಯಾಯವಾದಿ ದೇಸಾಯಿ, ಜಗನ್ನಾಥ ಸೂರಭಟ್ಟನವರ ಮತ್ತಿತರರಿದ್ದರು.