ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಖ್ಯಾತ ವೈದ್ಯ ಡಾ. ಕೆ.ಬಿ. ಧನ್ನೂರರ ಅಭಿನಂದನಾ ಗ್ರಂಥ `ಸಮಾಜಮುಖಿ’ ಜೂನ್ 22ಕ್ಕೆ ರೋಣದ ರಾಜೀವ ಗಾಂಧಿ ಶಿಕ್ಷಣ ಸಂಸ್ಥೆಯಲ್ಲಿ ಬೆಳಿಗ್ಗೆ 10.30ಕ್ಕೆ ಜರುಗಲಿರುವ ಡಾ. ಧನ್ನೂರರ ಅಮೃತ ಮಹೋತ್ಸವ ಅಭಿನಂದನಾ ಸಮಾರಂಭದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಪ್ರಧಾನ ಸಂಪಾದಕ ಅರುಣ ಕುಲಕರ್ಣಿ ಮತ್ತು ಸಂಪಾದಕ ಎಂ.ಎಸ್. ದಢೇಸೂರಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
1975ರಿಂದಲೂ ನರೇಗಲ್ಲ ಪಟ್ಟಣದಲ್ಲಿ ವೈದ್ಯಕೀಯ ಸೇವೆ ನೀಡುತ್ತಿರುವ ಡಾ. ಧನ್ನೂರ, ನರೇಗಲ್ಲ ಭಾಗದ ಜನರ ಸಂಜೀವಿನಿಯಾಗಿದ್ದಾರೆ. ಯಾವುದೇ ಸಮಯಕ್ಕೆ ಬಂದ ರೋಗಿಯು ಅವರಿಂದ ಚಿಕಿತ್ಸೆ ಪಡೆಯದೆ ಹಿಂತಿರುಗಿದ ಉದಾಹರಣೆಗಳಿಲ್ಲ. ಈ ಭಾಗದ ಜನರ ಮನ ಗೆದ್ದಿರುವ ಡಾ. ಧನ್ನೂರರಿಗೆ ಇದೇ ಜೂನ್ 20ಕ್ಕೆ 75 ವಸಂತಗಳು ತುಂಬುತ್ತಿವೆ. ಈ ಹಿನ್ನೆಲೆಯಲ್ಲಿ ರೋಣದಲ್ಲಿ ಜೂನ್ 22ರಂದು ಈ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಕೇವಲ ವೈದ್ಯಕೀಯ ಕ್ಷೇತ್ರ ಮಾತ್ರವಲ್ಲದೆ ಡಾ. ಕೆ.ಬಿ. ಧನ್ನೂರ ತಮ್ಮ ಸೇವೆಯನ್ನು ಸಂಗೀತ, ಸಾಮಾಜಿಕ, ಶಿಕ್ಷಣ, ಕೃಷಿ, ರಾಜಕೀಯ ಹೀಗೆ ಅನೇಕ ಕ್ಷೇತ್ರಗಳಲ್ಲಿ ವಿಸ್ತರಿಸಿಕೊಂಡು ಎಲ್ಲದರಲ್ಲಿಯೂ ಸೈ ಎನ್ನಿಸಿಕೊಂಡಿದ್ದಾರೆ. ರಾಜ್ಯದ ಗ್ರಾಮೀಣ ಭಾಗದಲ್ಲಿ ಆಂಗ್ಲ ಮಾಧ್ಯಮ ಶಾಲೆಯನ್ನು ನರೇಗಲ್ಲದಲ್ಲಿ ಪ್ರಾರಂಭಿಸಿದ ಮೊದಲಿಗರಾಗಿದ್ದಾರೆ. ಸ್ವತಃ ಗಾಯಕರಾಗಿರುವ ಅವರು ಅನೇಕ ವಾದ್ಯಗಳ ವಾದಕರೂ ಸಹ ಆಗಿದ್ದಾರೆ.
ಹಾಲಕೆರೆಯ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಅಭಿನಂದನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ರೋಣದ ಶ್ರೀ ಗುರುಪಾದ ದೇವರು, ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಮತ್ತು ನಿಡಗುಂದಿಕೊಪ್ಪದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ಕಾನೂನು, ಪ್ರವಾಸೋದ್ಯಮ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಡಿ.ಆರ್. ಪಾಟೀಲ ಗ್ರಂಥವನ್ನು ಲೋಕಾರ್ಪಣೆಗೊಳಿಸಲಿದ್ದು, ರೋಣ ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಮತ್ತು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಮಾಜಿ ಸಂಸದ ಆರ್.ಎಸ್. ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಗದುಗಿನ ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದ ಉಪನ್ಯಾಸಕ ವೃಂದದವರಿಂದ ಸಂಗೀತ ಸೇವೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
1972ರಲ್ಲಿ ಮಿ. ಕೆಎಂಸಿ, ರಾಜ್ಯಮಟ್ಟದ ಮಿ. ಮೆಡಿಕೊ ಪ್ರಶಸ್ತಿಯನ್ನು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪಡೆದುಕೊಂಡಿರುವ ಡಾ. ಧನ್ನೂರ 75ರಲ್ಲೂ ಉತ್ಸಾಹದ ಚಿಲುಮೆಯಾಗಿ ಯುವಕರಿಗೆ ಮಾದರಿಯಾಗಿದ್ದಾರೆ. ರೋಣ ಶಾಸಕ ಜಿ.ಎಸ್. ಪಾಟೀಲರು ಗೌರವ ಸಂಪಾದಕರಾಗಿರುವ ಸಮಾಜಮುಖಿ ಅಭಿನಂದನಾ ಗ್ರಂಥದಲ್ಲಿ ಅನೇಕ ವೈದ್ಯರು, ಆತ್ಮೀಯರು, ಬಾಲ್ಯದ ಗೆಳೆಯರು, ಬಂಧುಗಳು ಅವರೊಂದಿಗಿನ ಒಡನಾಟಗಳನ್ನು ಹಂಚಿಕೊಂಡಿದ್ದಾರೆ.